ಮುಂಬೈ: 'ಮಹಾರಾಷ್ಟ್ರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ 2.9 ಕೋಟಿ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಹುದು' ಎಂದು ವಂಚಿತ ಬಹುಜನ ಅಘಾಡಿ (ಬಿವಿಎ) ಪಕ್ಷದ ನಾಯಕ ಪ್ರಕಾಶ್ ಅಂಬೇಡ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
'ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ಅಳಿಸಿಹಾಕಿದರೆ, ಮುಂಬರುವ ಚುನಾವಣೆಗಳಲ್ಲಿ ನೇರ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ.
'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾರ್ಡ್ನಲ್ಲಿರುವ ಸಂತ್ರಸ್ತ ಕುಟುಂಬಗಳನ್ನು ಒಂದುಗೂಡಿಸಿ, ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಿದ್ದರೆ ಸರ್ಕಾರದ ಸುಳ್ಳು ಬಯಲಾಗುತ್ತಿತ್ತು. ಚುನಾವಣಾ ಆಯೋಗವು ವಂಚನೆ ಮಾಡುತ್ತಿದೆ ಎಂದು ಸಾಬೀತುಪಡಿಸಬಹುದಿತ್ತು' ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
'ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮವು ದೊಡ್ಡ ಸಂಖ್ಯೆಯ ಮತದಾರರನ್ನು ಹೊರಗಿಡುವುದಕ್ಕೆ ಕಾರಣವಾಗುವ ಅಪಾಯವಿದೆ' ಎಂದು ದೂರಿದ್ದಾರೆ.
ನಕಲಿ ಮತದಾರರು ಹಾಗೂ ಮೃತಪಟ್ಟವರ ಹೆಸರನ್ನು ತೆಗೆದುಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ದೇಶದಾದ್ಯಂತ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ನಿರ್ದಿಷ್ಟ ಸಿದ್ದಾಂತ, ಗುಂಪು ಹೊಂದಿದ ವ್ಯಕ್ತಿಗಳ ಹೆಸರನ್ನು ಮಾತ್ರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಎಸ್ಐಆರ್ಗಾಗಿ ಪಂಜಾಬ್ ಸಜ್ಜು: ಸಿಇಒ
ಚಂಡೀಗಡ: 'ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್)ಗಾಗಿ ಪಂಜಾಬ್ ಸಿದ್ಧವಾಗಿದೆ. ಆಯೋಗದ ದಿನಾಂಕ ನಿಗದಿಗೂ ಮುನ್ನವೇ ಪೂರ್ವ ಸಿದ್ಧತಾ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ' ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
'ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಗ್ರ ಎಸ್ಐಆರ್ನ ಮ್ಯಾಪಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ' ಎಂದು ಪಂಜಾಬ್ನ ಮುಖ್ಯ ಚುನಾವಣಾ ಅಧಿಕಾರಿ ಅನಿಂದಿತಾ ಮಿತ್ರಾ ತಿಳಿಸಿದ್ದಾರೆ.
ಏಪ್ರಿಲ್ 4ರವರೆಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ 'ಶೇಕಡ 74.27ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ. ರಾಜ್ಯದ 2.14 ಕೋಟಿ ಮತದಾರರ ಪೈಕಿ 1.59 ಕೋಟಿ ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

