ಸದನದಲ್ಲಿ ಚರ್ಚೆಗೆ ಉತ್ತರಿಸಿದ ಅವರು, "ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೇರಿ ಮೂರು ಮಸೂದೆಗಳು ಸದನದ ಮುಂದಿವೆ. ಇವುಗಳಿಂದ ದಕ್ಷಿಣ ರಾಜ್ಯಗಳಿಗೆ ಹಾನಿ ಉಂಟಾಗುತ್ತದೆ ಎನ್ನುವ ನಿರೂಪಣೆಗೆ ಯಾವುದೇ ವಾಸ್ತವಿಕತೆ ಇಲ್ಲ," ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ವಿವರಿಸಿದ ಶಾ, "ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿದ್ದು, ಒಟ್ಟು 543 ಸ್ಥಾನಗಳ ಪೈಕಿ ಶೇ. 5.15ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ಬಳಿಕ ಈ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ. 812 ಸದಸ್ಯರ ಬಲದ ಲೋಕಸಭೆಯಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ. 5.14ರಷ್ಟೇ ಇರುತ್ತದೆ. ಹೀಗಾಗಿ ರಾಜ್ಯಕ್ಕೆ ಯಾವುದೇ ನಷ್ಟವಾಗುವುದಿಲ್ಲ," ಎಂದು ಅವರು ತಿಳಿಸಿದರು.
ಆಂಧ್ರಪ್ರದೇಶದ ಕುರಿತು ಮಾತನಾಡಿದ ಅವರು, "ಪ್ರಸ್ತುತ 25 ಸ್ಥಾನಗಳಿದ್ದು, ಶೇ. 4.60ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ನಂತರ ಸ್ಥಾನಗಳು 38ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 4.75ಕ್ಕೆ ಹೆಚ್ಚಳವಾಗಲಿದೆ. ತೆಲಂಗಾಣದಲ್ಲಿ 17 ಸ್ಥಾನಗಳಿರುವ ರಾಜ್ಯದ ಪ್ರಾತಿನಿಧ್ಯ ಶೇ. 3.13. ಶೇ. 50ರಷ್ಟು ಏರಿಕೆಯ ಬಳಿಕ ಸ್ಥಾನಗಳು 26ಕ್ಕೆ ಹೆಚ್ಚಳವಾಗಲಿದ್ದು, ಪ್ರಾತಿನಿಧ್ಯ ಶೇ. 3.18ಕ್ಕೆ ಏರಲಿದೆ," ಎಂದು ವಿವರಿಸಿದರು.
ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಭರವಸೆ ನೀಡಿದ ಶಾ, "39 ಸ್ಥಾನಗಳು 59ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 7.18ರಿಂದ ಶೇ. 7.23ಕ್ಕೆ ಹೆಚ್ಚಳವಾಗಲಿದೆ. ಕೇರಳದಲ್ಲಿಯೂ 20 ಸ್ಥಾನಗಳು 30ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯದ ಪಾಲು ಶೇ. 3.67ರಿಂದ ಶೇ. 3.68ಕ್ಕೆ ಸ್ವಲ್ಪ ಮಾತ್ರ ಏರಿಕೆಯಾಗಲಿದೆ", ಎಂದು ಅಮಿತ್ ಶಾ ಅವರು ಹೇಳಿದರು.

