ಅಹಮದಾಬಾದ್: ಮದುವೆಯೂಟ ಸೇವಿಸಿದ ಬಳಿಕ 400ಕ್ಕೂ ಹೆಚ್ಚು ಅತಿಥಿಗಳು ಅಸ್ವಸ್ಥಗೊಂಡಿರುವ ಘಟನೆ ಗುಜರಾತ್ ನ ದಾಹೋಡ್ ಜಿಲ್ಲೆಯಲ್ಲಿ ನಡೆದಿದೆ. ವಿಷಪೂರಿತ ಆಹಾರ ಸೇವನೆ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಪ್ರಾಥಮಿಕ ವಿವರಗಳ ಪ್ರಕಾರ, ಮದುವೆಯೂಟಕ್ಕೆ ಸುಮಾರು 1,000 ಅತಿಥಿಗಳು ಹಾಜರಾಗಿದ್ದರು.
ಈ ವೇಳೆ ಅತಿಥಿಗಳಿಗೆ ಬೇಳೆ ಅನ್ನ, ತರಕಾರಿ ಪೂರಿ, ಹಪ್ಪಳ, ಮಾವಿನ ಶರಬತ್ತು ಹಾಗೂ ಪನೀರ್ ಸಬ್ಜಿಯನ್ನು ಬಡಿಸಲಾಗಿತ್ತು ಎನ್ನಲಾಗಿದೆ.
ಭೋಜನ ಮುಗಿದ ಕೆಲವೇ ಗಂಟೆಗಳಲ್ಲಿ ಅತಿಥಿಗಳಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿ ಹಾಗೂ ಭೇದಿ ಕಂಡುಬಂದಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಅತಿಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ರೋಗಿಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದಂತೆಯೇ ಕುಟುಂಬದ ಸದಸ್ಯರು ನೆರವಿಗಾಗಿ ಮೊರೆ ಇಟ್ಟಿದ್ದಾರೆ. ಇದರ ಬೆನ್ನಿಗೇ ಯುದ್ಧೋಪಾದಿಯಲ್ಲಿ ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಸ್ವಸ್ಥಗೊಂಡ ಅತಿಥಿಗಳನ್ನು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಲು 108 ಆಂಬುಲೆನ್ಸ್ಗಳು, ಖಾಸಗಿ ವಾಹನಗಳು ಹಾಗೂ ಸ್ಥಳೀಯ ಸಾರಿಗೆಯನ್ನು ಬಳಸಿಕೊಳ್ಳಲಾಗಿದೆ.
ಭೋಜನ ಮುಗಿದ ತಕ್ಷಣ ಇಬ್ಬರು-ಮೂರು ಮಕ್ಕಳಲ್ಲಿ ಮೊದಲಿಗೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಇದಾದ ಬಳಿಕ ಇನ್ನಷ್ಟು ಜನರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉದಯ್ ತಿಲಾವತ್ ತಿಳಿಸಿದ್ದಾರೆ.
"ಮಧ್ಯರಾತ್ರಿಗೂ ಮುನ್ನ 58 ಜನರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಎಲ್ಲ ವೈದ್ಯರೂ ಆಸ್ಪತ್ರೆಯಲ್ಲಿದ್ದು, ಕೆಲವು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಲ್ಲಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 232 ರೋಗಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ 137 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ 85 ಮಂದಿ ವೈದ್ಯಕೀಯ ನಿಗಾವಣೆಯಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ" ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಪ್ರಮಾಣದಿಂದ ಅಬೋಲೋದ್ ನಾದ್ಯಂತ ಆತಂಕ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥ ಜಿತೇಂದ್ರ ಪಾಂಚಾಲ್ ತಿಳಿಸಿದ್ದಾರೆ.
"ಭೋಜನಕ್ಕೆ ಸುಮಾರು 1,000 ಮಂದಿ ಹಾಜರಾಗಿದ್ದರು. ಈ ಪೈಕಿ ಸುಮಾರು 250 ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಯಾವುದೇ ಸಾವಿನ ವರದಿಯಾಗದಿದ್ದರೂ, ಆಸ್ಪತ್ರೆಗೆ ಕರೆ ತಂದಾಗ ಕೆಲವು ರೋಗಿಗಳ ಸ್ಥಿತಿ ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಲುಷಿತಗೊಳ್ಳುವಿಕೆಯ ಪ್ರಮಾಣದ ಬಗ್ಗೆ ಆತಂಕ ಮತ್ತಷ್ಟು ಹೆಚ್ಚಿದೆ.
ಘಟನಾ ಸ್ಥಳದಿಂದ ಶಂಕಿತ ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಆಹಾರ ಸರಬರಾಜುದಾರರು ಹಾಗೂ ಸಂಘಟಕರು ಸೇರಿದಂತೆ ಈ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

