ಗೋಹತ್ಯೆಯು ಸಮಾಜದ ಒಂದು ದೊಡ್ಡ ವರ್ಗದ ಧಾರ್ಮಿಕ ನಂಬಿಕೆಗಳಿಗೆ ಹಾನಿಯನ್ನುಂಟು ಮಾಡುತ್ತದೆ.
ಇದು ತಕ್ಷಣದ ತೀವ್ರ ಭಾವನೆಗಳನ್ನು ಮತ್ತು ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಜೆ.ಮುನೀರ್ ಮತ್ತು ಸಂಜೀವ್ ಕುಮಾರ್ ಅವರ ಪೀಠವು ಇತ್ತೀಚಿನ ತನ್ನ ಆದೇಶದಲ್ಲಿ ಹೇಳಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ವ್ಯಾಪಕ ಅಶಾಂತಿಯನ್ನು ಸೃಷ್ಟಿಸುವ 'ಅಂತರ್ಗತ ಸಾಮರ್ಥ್ಯವನ್ನು' ಹೊಂದಿರುತ್ತವೆ,ಇದು ಸಾಮಾನ್ಯ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅದು ಹೇಳಿದೆ.
ಮಾ.15,2025ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಅವಶೇಷಗಳು ಪತ್ತೆಯಾಗಿದ್ದವು. ಅದು ಹೋಳಿ ಹಬ್ಬದ ಸಂದರ್ಭವಾಗಿದ್ದರಿಂದ ಈ ಘಟನೆಯು ಹಿಂದು ಸಮುದಾಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ಮತ್ತು ಹಿಂದುತ್ವ ಸಂಘಟನೆಗಳ ಸದಸ್ಯರು ಪ್ರತಿಭಟನೆಯನ್ನು ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು, ರಸ್ತೆ ತಡೆಯನ್ನೂ ನಡೆಸಿದ್ದರು.
ತನಿಖೆಯ ಬಳಿಕ ಪೊಲೀಸರು ಅರ್ಜಿದಾರ ಮತ್ತು ಆತನ ಇಬ್ಬರು ಸಹಚರರನ್ನುಬಂಧಿಸಿದ್ದರು. ಕಾಡಿನಲ್ಲಿ ಒಂದು ಹಸು ಮತ್ತು ಎರಡು ಕರುಗಳನ್ನು ವಧಿಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದರು.
ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದ ಅರ್ಜಿದಾರ ತಾನು ಬಿಡುಗಡೆಗೊಂಡ ಬಳಿಕ ಮತ್ತೆ ಗೋವಧೆಯನ್ನು ಮಾಡುವುದಾಗಿ ಜೈಲಿನಿಂದ ಸಂದೇಶಗಳನ್ನು ರವಾನಿಸಿದ್ದ ಎಂದು ಪೋಲಿಸರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್ಎಸ್ಎ ಅಡಿ ಆತನ ಬಂಧನಕ್ಕೆ ಆದೇಶ ಹೊರಡಿಸಲಾಗಿತ್ತು.
ಅರ್ಜಿದಾರನು ಜೈಲಿನಿಂದ ಹೊರಬಂದ ಬಳಿಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಬಹುದು ಎಂಬ ಅಧಿಕಾರಿಗಳ ಆತಂಕವು ಸಮರ್ಥನೀಯವಾಗಿದೆ ಎಂದು ಗುರುವಾರ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಎನ್ಎಸ್ಎ ಭಾರತದ ರಕ್ಷಣೆ, ವಿದೇಶಿ ಸಂಬಂಧಗಳು ಮತ್ತು ದೇಶದ ಭದ್ರತೆಗೆ ಧಕ್ಕೆಯನ್ನುಂಟು ಮಾಡಬಹುದಾದ ಯಾವುದೇ ವ್ಯಕ್ತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸರಕಾರಗಳಿಗೆ ಅಧಿಕಾರ ನೀಡುತ್ತದೆ.

