ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಅಟ್ಟಹಾಸ ಮೆರೆದಿದ್ದು, ಕೇವಲ ಎರಡೇ ಗಂಟೆಯಲ್ಲಿ ಕನಿಷ್ಠ 40 ಜನರಿಗೆ ಕಚ್ಚಿದೆ. ಈ ಘಟನೆಯಿಂದಾಗಿ ಸಂತ್ರಸ್ತರು ರೇಬೀಸ್ ವಿರೋಧಿ ಲಸಿಕೆ ಪಡೆಯಲು ಸರ್ಕಾರಿ ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ.
ಬೀದಿ ನಾಯಿಯೊಂದು ಮಂಗಳವಾರ ಪೇಟೆ, ಅಜೀಜ್ಪುರ, ಭೀಮನಗರ ಮತ್ತು ರೋಜಾ ಮೊಹಲ್ಲಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರ ಮೇಲೆ ಏಕಾಏಕಿ ದಾಳಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನಾಯಿಯು ರಸ್ತೆಯಲ್ಲಿ ಸಿಕ್ಕಸಿಕ್ಕವರನ್ನೆಲ್ಲಾ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರಿಂದ ಜನರು ಭಯಭೀತರಾಗಿ ಓಡಿದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆ ಪ್ರದೇಶದಲ್ಲಿ ಉಂಟಾಗಿದ್ದ ಆತಂಕದ ವಾತಾವರಣವನ್ನು ವಿವರಿಸಿದ್ದಾರೆ.
'40 ಗಾಯಾಳುಗಳಿಗೆ ರೇಬೀಸ್ ಚುಚ್ಚುಮದ್ದನ್ನು ನೀಡಿದ್ದೇವೆ. ಅವರಲ್ಲಿ ಹತ್ತು ಮಂದಿಗೆ ತೀವ್ರವಾದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಬಾಜೋಗೈನ ಸ್ವಾಮಿ ರಾಮಾನಂದ ತೀರ್ಥ ಸರ್ಕಾರಿ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದೇವೆ' ಎಂದು ಡಾ. ದತ್ತಾತ್ರೇಯ ಕೇಂದ್ರೆ ತಿಳಿಸಿದ್ದಾರೆ.
ಬೀದಿ ನಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನಾವು ನಾಯಿಗಳನ್ನು ಹಿಡಿದು ನಗರ ಸಭೆ ಕಚೇರಿಯೊಳಗೆ ಬಿಡುತ್ತೇವೆ ಎಂದು ವಿಕಾಸ ಸಂಘರ್ಷ ಸಮಿತಿಯ ಅಧ್ಯಕ್ಷ ಹನುಮಂತ್ ಭೋಸಲೆ ಎಚ್ಚರಿಸಿದ್ದಾರೆ.

