ನಮಗೆಲ್ಲ ತಿಳಿದಿರುವಂತೆ ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗಳ ಮತದಾನ ಬೆಳಿಗ್ಗೆ 8ರಿಂದ ಸಂಜೆ 6 ಅಥವಾ 7 ಗಂಟೆವರೆಗೆ ನಡೆಯುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತದಾನದ ಅವಧಿಯಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಆದರೆ, ಮಧ್ಯರಾತ್ರಿವರೆಗೂ ಎಲ್ಲಿಯೂ ಮತದಾನ ನಡೆಯುವುದಿಲ್ಲ.
ಆದರೆ, 2024ರಲ್ಲಿ ಆಂಧ್ರ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಧ್ಯರಾತ್ರಿಯಲ್ಲೂ ಮತದಾನ ನಡೆದಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ಆರ್ಥಿಕ ತಜ್ಞ ಪರಕಾಳ ಪ್ರಭಾಕರ್ ಆರೋಪಿಸಿದ್ದಾರೆ.
ಇದು ವಿಚಿತ್ರ ಎನಿಸಿದರೂ ನಿಜ ಎನ್ನುತ್ತಿದ್ದಾರೆ ಪ್ರಭಾಕರ್. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಧ್ಯರಾತ್ರಿ ಬಳಿಕ ಸುಮಾರು 17 ಲಕ್ಷ ಮತ ಚಲಾವಣೆಯಾಗಿದೆ. ಈ ಮತಗಳು ಕೇವಲ 6 ಸೆಕೆಂಡುಗಳಲ್ಲಿ ಚಲಾವಣೆಯಾಗಿವೆ ಎಂದು ಆರೋಪಿಸಿದ್ದಾರೆ.
ಮತದಾನದ ವೇಳೆ ಇವಿಎಂಗಳು ರೀಸೆಟ್ ಆಗಲು 14 ಸೆಕೆಂಡುಗಳು ಬೇಕಿರುವಾಗ, ಕೇವಲ 6 ಸೆಕೆಂಡುಗಳಲ್ಲಿ ಲಕ್ಷ ಲಕ್ಷ ಮತಗಳು ಹೇಗೆ ಚಲಾವಣೆಯಾದವು? ಆ ಸಮಯದಲ್ಲಿ ಒಬ್ಬ ಮತದಾರ ವಾಸ್ತವಿಕವಾಗಿ ಮತಗಟ್ಟೆ ಒಳಗೆ ಬಂದು ಮತ ಚಲಾಯಿಸಿ ನಿರ್ಗಮಿಸಲು ಸಾಧ್ಯವೇ? ಎಂದು ಪ್ರಭಾಕರನ್ ಪ್ರಶ್ನಿಸಿದ್ದಾರೆ. ಅಲ್ಲದೇ, ರಾತ್ರಿ 8 ಗಂಟೆಯ ನಂತರ ಏನೋ ಅಸಾಮಾನ್ಯವಾದ ಘಟನೆ ನಡೆದಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆಂಧ್ರದ 3,500 ಮತಗಟ್ಟೆಗಳಲ್ಲಿ ತಡರಾತ್ರಿ 2 ಗಂಟೆವರೆಗೆ ಮತದಾನ ನಡೆದಿದೆ ಎಂದು ಪ್ರಭಾಕರನ್ ಆರೋಪಿಸಿದ್ದಾರೆ.
ಈ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಮೈತ್ರಿಕೂಟವು 175 ಕ್ಷೇತ್ರಗಳ ಪೈಕಿ 164ರಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತ್ತು.
ಮತದಾನದ ದತ್ತಾಂಶ ಉಲ್ಲೇಖಿಸಿ ಮಾತನಾಡಿದ ಅವರು, ರಾತ್ರಿ 8 ಗಂಟೆಯಿಂದ ತಡರಾತ್ರಿ 2ರವರೆಗೆ ಸುಮಾರು 52 ಲಕ್ಷ ಮತದಾನವಾಗಿದೆ. ದರಲ್ಲೂ ರಾತ್ರಿ 11.45ರಿಂದ ತಡರಾತ್ರಿ 2 ರವರೆಗೂ ಶೇ 4.16ರಷ್ಟು ಮತದಾನವಾಗಿದೆ. ಮಧ್ಯರಾತ್ರಿ ಬಳಿಕವೇ 17 ಲಕ್ಷ ಮತ ಚಲಾವಣೆಯಾಗಿದೆ. ಮಧ್ಯರಾತ್ರಿಯ ನಂತರ, ಪ್ರತಿ 20 ಸೆಕೆಂಡುಗಳಿಗೆ ಒಂದು ಮತ ಚಲಾಯಿಸಲಾಗಿದೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ ಎಂದು ಅವರು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದರು. ಟಿಡಿಪಿ 135 ಸ್ಥಾನಗಳನ್ನು ಪಡೆದರೆ, ಬಿಜೆಪಿ ಎಂಟು ಸ್ಥಾನಗಳು ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ 21 ಸ್ಥಾನಗಳನ್ನು ಗೆದ್ದಿತ್ತು.
ಪ್ರಭಾಕರ್ ಮಾತ್ರವಲ್ಲದೇ, ಇಂದು ವಿರೋಧ ಪಕ್ಷಗಳ ಹಲವು ನಾಯಕರು ಆಂಧ್ರದ ಮತ ಚಲಾವಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
2024ರ ಮೇ 13 ರಂದು ಸಂಜೆ 5 ಗಂಟೆಗೆ ಮತದಾನ ಮುಗಿದ ನಂತರ ಶೇ 68.04ರಷ್ಟು ಮತದಾನ ನಡೆದಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಬಳಿಕ, ರಾತ್ರಿ 8 ಗಂಟೆಯ ಪ್ರಕಟಣೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಶೇ 68.12ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ. ರಾತ್ರಿ 11.45ಕ್ಕೆ ಮತದಾನದ ಪ್ರಮಾಣವನ್ನು ಪರಿಷ್ಕರಿಸಿದ ಆಯೋಗ, ಶೇ 76.50ರಷ್ಟು ಮತದಾನವಾಗಿದೆ ಎಂದು ಹೇಳಿದೆ. ನಾಲ್ಕು ದಿನಗಳ ನಂತರ ಬಿಡುಗಡೆಯಾದ ಅಂತಿಮ ಮತದಾನದ ಪ್ರಮಾಣದಲ್ಲಿ ಶೇ 81.79ರಷ್ಟು ಮತದಾನವಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
'ಮತದಾನದ ಅಂಕಿಅಂಶಗಳಲ್ಲಿ ಲೋಪವಾಗಿದೆ ಎಂದು ಯಾವುದೇ ಪಕ್ಷಕ್ಕೆ ಅನುಮಾನ ಬಂದರೂ ಮೇಲ್ಮನವಿ ಸಲ್ಲಿಸುವುದು ಮತ್ತು ನ್ಯಾಯಾಲಯದ ಮೊರೆ ಹೋಗುವ ಆಯ್ಕೆ ಇದೆ. ಆಂಧ್ರ ಪ್ರದೇಶದ ಯಾವೊಬ್ಬ ಅಭ್ಯರ್ಥಿಯೂ ಇದನ್ನು ಮಾಡಿಲ್ಲ. ಎರಡು ವರ್ಷಗಳ ನಂತರ ಅಕ್ರಮ ಕುರಿತ ಆರೋಪ ಅಸಂವಿಧಾನಿಕ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ' ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
'ಪಾರದರ್ಶಕತೆಯ ಕೊರತೆ'
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ಗಮನ ಸೆಳೆದರು.
ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಒಳಗೊಂಡಿರುವ ಫಾರ್ಮ್ 17ಸಿ ಅನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಭೂಷಣ್ ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಯನ್ನು ಯಂತ್ರ ಓದಬಲ್ಲ ಮಾದರಿಯಲ್ಲಿ ಬಿಡುಗಡೆ ಮಾಡದ ಕಾರಣ ಸ್ವತಂತ್ರ ಪರಿಶೀಲನೆ ಕಷ್ಟಕರವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಬಿಜೆಪಿ ವಿರುದ್ಧ ಮತ ಕಳ್ಳತನ ಆರೋಪ ಮಾಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಇದೇ ಕಳವಳವನ್ನು ವ್ಯಕ್ತಪಡಿಸಿದ್ದರು.
ಪಾರದರ್ಶಕತೆಗೆ ಪ್ರತಿರೋಧವು ಆಳವಾದ ಸಾಂಸ್ಥಿಕ ಸಮಸ್ಯೆಯನ್ನು ಸೂಚಿಸುತ್ತದೆ. ಪ್ರಜಾಪ್ರಭುತ್ವವು ಕತ್ತಲೆಯಲ್ಲಿ ನಡೆಯಲು ಸಾಧ್ಯವಿಲ್ಲ. ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು, ವಿವಿಪ್ಯಾಟ್ ಸ್ಲಿಪ್ಗಳ ಕಡ್ಡಾಯ ಎಣಿಕೆ ಮಾಡಬೇಕೆಂದು ಅವರು ಒತ್ತಾಯಿಸಿದರು.

