ಕೋಲ್ಕತ್ತ: 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಆರು ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಅವರು ಬಿಡುಗಡೆ ಮಾಡಿದ್ದಾರೆ.
'ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
'ಏಕರೂಪ ನಾಗರಿಕ ಸಂಹಿತೆಯ ಶಿಫಾರಸು ಬಿಜೆಪಿಯದ್ದಲ್ಲ. ಇದು ಸಂವಿಧಾನಿಕವಾಗಿದ್ದು' ಎಂದು ಅಮಿತ್ ಶಾ ವಿವರಿಸಿದ್ದಾರೆ.
'ಟಿಎಂಸಿಯ ತುಷ್ಟೀಕರಣ ರಾಜಕಾರಣದಿಂದಾಗಿ ಯುಸಿಸಿಯನ್ನು ಇಷ್ಟು ದಿನ ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಾವು ಯಾವ ರಾಜ್ಯಗಳಲ್ಲಿ ಸರ್ಕಾರ ರಚಿಸಿದ್ದೇವೋ ಅಲ್ಲಿ ಜಾರಿಗೆ ತಂದಿದ್ದೇವೆ. ಬಂಗಾಳದಲ್ಲೂ ಅದನ್ನೇ ಮಾಡಲಿದ್ದೇವೆ' ಎಂದಿದ್ದಾರೆ.
'ಬಂಗಾಳದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಒಂದೇ ಕಾನೂನು ಅನ್ವಯವಾಗಲಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, 'ನಮ್ಮದು ವಂಶಪಾರಂಪರ್ಯ ಪಕ್ಷವಲ್ಲ. ಸಿಎಂ ಅಭ್ಯರ್ಥಿ ಬಂಗಾಳದವರೇ ಆಗಿರುತ್ತಾರೆ' ಎಂದಿದ್ದಾರೆ.
'ಬಂಗಾಳದವರ ಆಹಾರ ಪದ್ಧತಿಯಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದಿಲ್ಲ. ಮೀನು ಹಾಗೂ ಮೊಟ್ಟೆ ಸೇವನೆಯನ್ನು ನಿಲ್ಲಿಸಲಾಗುವುದಿಲ್ಲ. ಅದು ಟಿಎಂಸಿಯ ಸುಳ್ಳು ಆರೋಪವಾಗಿದೆ' ಎಂದು ತಿರುಗೇಟು ನೀಡಿದ್ದಾರೆ.

