ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಜರಾತ್ ಜನರ ಬಗ್ಗೆ ನೀಡಿರುವ ಹೇಳಿಕೆಯು ದೇಶದಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ, ಕೇರಳದ ಜನರು ವಿದ್ಯಾವಂತರು ಎನ್ನುವ ಭರದಲ್ಲಿ ಗುಜರಾತ್ ಜನರನ್ನು ಅನಕ್ಷರಸ್ಥರು ಎಂದು ಟೀಕಿಸಿದ್ದರು.
ಖರ್ಗೆ ಅವರ ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ನಾಚಿಕೆಯಿಲ್ಲದ ಕೆಲಸ ಎಂದು ಕರೆದಿದ್ದಾರೆ
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಖರ್ಗೆ ಅವರ ಇಂತಹ ವಿಭಜಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಗೆ ಏನಾದರೂ ವಿವೇಚನೆ ಇದ್ದರೆ ಈ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಬೇಕು ಮತ್ತು ತಕ್ಷಣವೇ ಕ್ಷಮೆಯಾಚಿಸಬೇಕು ಒತ್ತಾಯಿಸಿದ್ದಾರೆ. ಇಡೀ ರಾಜ್ಯದ ಜನರನ್ನು ಅನಕ್ಷರಸ್ಥರು ಎಂದು ಕರೆದಿರುವ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ಅರ್ಹರಲ್ಲ ಎಂದು ಪ್ರಸಾದ ಕಿಡಿಕಾರಿದ್ದಾರೆ.
ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ರಂತಹ ಘಟಾನುಘಟಿಗಳು ಅಲಂಕರಿಸಿದ್ದ ಹುದ್ದೆಯಲ್ಲಿರುವವರು ಇಂತಹ ಹಗುರವಾದ ಭಾಷೆಯನ್ನು ಬಳಸುತ್ತಿರುವುದು ವಿಷಾದನೀಯ ಅಸಮಾಧಾನ ವ್ಯಕ್ತಪಡಿಸಿರುವ ಪ್ರಸಾದ್, ಗುಜರಾತ್ ರಾಜ್ಯವು ದೇಶಕ್ಕೆ ಹಲವಾರು ರಾಷ್ಟ್ರೀಯ ನಾಯಕರು ಮತ್ತು ಬುದ್ಧಿಜೀವಿಗಳನ್ನು ನೀಡಿದೆ, ಅಲ್ಲದೇ ಪ್ರಸ್ತುತ ಗುಜರಾತ್ನ ಸಾಕ್ಷರತಾ ಪ್ರಮಾಣವು ಶೇ. 82 ರಷ್ಟಿದೆ ಎಂಬ ದತ್ತಾಂಶವನ್ನು ಉಲ್ಲೇಖಿಸಿದರು. ಕೇವಲ ಪ್ರಧಾನಿ ನರೇಂದ್ರ ಮೋದಿ ಮೇಲಿನ ದ್ವೇಷಕ್ಕಾಗಿ ಇಡೀ ರಾಜ್ಯದ ಜನರನ್ನೇ ಅನಕ್ಷರಸ್ಥರು ಎಂದು ಕರೆಯುವುದು ಎಷ್ಟು ಸಮಂಜಸ ಎಂದು ಮಾಜಿ ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ದೇಶದ ಕ್ಷಮೆಯಾಚಿಸಿ
ಗುಜರಾತ್ ಮಾತ್ರವಲ್ಲದೆ ಬಿಹಾರ ಮತ್ತು ಉತ್ತರ ಪ್ರದೇಶದ ಜನರ ಬಗ್ಗೆಯೂ ಇಂತಹ ಅವಹೇಳನಕಾರಿ ಮಾತುಗಳನ್ನಾಡಿರುವ ಖರ್ಗೆ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದಿರುವ ರವಿಶಂಕರ್ ಪ್ರಸಾದ್, ಇಂತಹ ಹೇಳಿಕೆಗಳು ದೇಶವನ್ನು ಒಡೆಯುವ ವಿಭಜಕ ನೀತಿ ಹೊಂದಿವೆ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
ಖರ್ಗೆ ಹೇಳಿದ್ದೇನು..?
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಲ್ಲಿನ ಜನರು ವಿದ್ಯಾವಂತರು ಮತ್ತು ಬುದ್ಧಿವಂತರು ಎಂದು ಶ್ಲಾಘಿಸುತ್ತಾ, ಇದೇ ಸಂದರ್ಭದಲ್ಲಿ ಗುಜರಾತ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ಅನಕ್ಷರಸ್ಥರು ಇರುವಂತೆ ಕೇರಳದವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

