ಬದಿಯಡ್ಕ: ಸಹಸ್ರಾರು ಮಂದಿ ಭಗವದ್ಭಕ್ತರ ಶ್ರದ್ಧಾಭಕ್ತಿಯ ಪ್ರಾರ್ಥನೆಯೊಂದಿಗೆ ಪೆರಡಾಲ ಶ್ರೀ ಉದನೇಶ್ವರ ದೇವರಿಗೆ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ಭಾನುವಾರ ಪ್ರಾತಃಕಾಲ ಗಣಪತಿ ಹೋಮ, ಗೋವಿನ ದರ್ಶನದೊಂದಿಗೆ ಕವಾಟೋದ್ಘಾಟನೆ ನಡೆಯಿತು.
ಶ್ರೀದೇವರನ್ನು ಪ್ರಾರ್ಥಿಸಿದ ತಂತ್ರಿಗಳು ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ತೆರೆದರು. ಕವಾಟಬಂಧನದ ಸಂದರ್ಭ ಉರಿಸಿದ 3 ಭದ್ರದೀಪಗಳು ಬೆಳಗುತ್ತಿರಲು ಶ್ರೀದೇವರಿಗೆ ಶುದ್ಧ ದೇಶೀಯ ತಳಿಯ ಗೋವಿನ ದರ್ಶನ ಮಾಡಲಾಯಿತು. ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ - ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ ನಡೆಯಿತು. ಈ ಸಂದರ್ಭದಲ್ಲಿ ಊರಪರವೂರ ಸಹಸ್ರಾರು ಮಂದಿ ಭಗವದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

