ಮಂಜೇಶ್ವರ: ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ ಏ. 28 ರಂದು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ.
2025ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಡಾ. ಟಿ. ಗೋವಿಂದರಾಜು ಅವರ 'ಕೃಷ್ಣಯ್ಯನ ಕೊಳಲು' ಕಾದಂಬರಿಗೆ ಮತ್ತು ಮಹಾಶ್ವೇತಾದೇವಿ ಜನ್ಮಶತಮಾನೋತ್ಸವ ಕಥಾ ಪ್ರಶಸ್ತಿ ಲಿಂಗರಾಜ ಸೊಟ್ಟಪ್ಪನವರ ಅವರ 'ಕೆಂಪು ನದಿ' ಕಥಾಸಂಕಲನಕ್ಕೆ ದೊರಕಿದೆ. ಖ್ಯಾತ ಸಾಹಿತಿ ಡಾ. ನಾ. ಮೊಗಸಾಲೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭ ಹಿರಿಯ ಲೇಖಕಿ ಡಾ. ಮಹೇಶ್ವರಿ ಯು. ಅವರ ಅಧ್ಯಕ್ಷತೆಯಲ್ಲಿ ಸುನಂದಾ ಬೆಳಗಾಂವಕರ ಮತ್ತು ಮಹಾಶ್ವೇತಾದೇವಿಯವರ ಸಾಹಿತ್ಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಪ್ರೊ. ಶಿವಶಂಕರ ಪಿ, ಡಾ. ಸುಭಾಷ್ ಪಟ್ಟಾಜೆ, ಡಾ. ರತ್ನಾಕರ ಕುನಗೋಡು, ರೇಷ್ಮಾ ಭಟ್, ಸೌಮ್ಯ ಪ್ರವೀಣ್, ಕಲ್ಲಚ್ಚು ಮಹೇಶ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

