ಕಾಸರಗೋಡು: ಇರಾನ್-ಅಮೇರಿಕಾ ನಡುವಿನ ಯುದ್ಧಾತಂಕ ಮುಂದುವರಿಯುತ್ತಿರುವ ಮಧ್ಯೆ ಇರಾನ್ನ ಬಂದರಿನಲ್ಲಿ ಸಿಲುಕಿಕೊಂಡಿರುವ ಹಡಗಿನಲ್ಲಿ ಆಹಾರ, ನೀರು ಲಭಿಸದೆ ಕಾಸರಗೋಡು ನಿವಾಸಿಯೂ ಸೇರಿದಂತೆ ಹಲವು ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದೆ. ಕಾಸರಗೋಡು ಪೆರಿಯಾ ಪನ್ನಿಕುನ್ನು 'ನಾರಾಯಣ ನಿವಾಸ'ದ ಎ. ಬಾಲಕೃಷ್ಣನ್ ಅವರ ಪುತ್ರ ವೈಷ್ಣವ್ ಪುಲ್ಲಾಯಿಕೋಡ್ ಸೇರಿದಂತೆ ಇತರ ಸಿಬ್ಬಂದಿ ಹಡಗಿನಲ್ಲಿ ಸಿಲುಕಿಕೊಂಡವರು.
ಹಡಗಿನಲ್ಲಿ ನೀರು ಮತ್ತು ಆಹಾರ ಖಾಲಿಯಾಗತೊಡಗಿರುವ ಹಿನ್ನೆಲೆಯಲ್ಲಿ ಅದರ ಚೀಫ್ ಆಫೀಸರ್ ತಮ್ಮ ಸ್ವಂತ ಖರ್ಚಿನಲ್ಲಿ ಇರಾನ್ನಿಂದ ದೋಣಿಗಳ ಮೂಲಕ ಬರುತ್ತಿರುವ ಆಹಾರ ವಿತರಣೆಗಾರರಿಂದ ಆಹಾರ ಖರೀದಿಸಿ ಅದನ್ನು ಸೇವಿಸಿ ಪ್ರಾಣ ಉಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಡಗಲ್ಲಿ ದುಡಿಯುತ್ತಿರುವ ನಾವಿಕರಿಗೆ ಹಲವು ತಿಂಗಳಿಂದ ವೇತನವೂ ಲಭಿಸಿಲ್ಲ. ಈ ಹಡಗು ದುರಸ್ತಿಬಿದ್ದಿದ್ದು, ಅದನ್ನು ಸರಿಪಡಿಸುವ ಗೋಚಿಗೆ ಪ್ರಸ್ತುತ ಹಡಗಿನ ಕಂಪೆನಿಯವರು ಹೋಗಿಲ್ಲವೆಂಬ ದೂರು ಕೇಳಿಬಂದಿದೆ. ಶಾರ್ಜಾ ಸಫಾದ ಅಬ್ದುಲ್ ಸಲಾಂ ಶಿಪ್ಪಿಂಗ್ ಎಂಎಲ್ಸಿ ಮಾಲಿಕತ್ವದ ಹಡಗು ಇದಾಗಿದ್ದು, ಶಾರ್ಜಾ, ದುಬೈ ಮತ್ತು ಇರಾನಿಗೆ ಸರಕು ಪೂರೈಸುತ್ತಿದೆ. ವೈಷ್ಣವ್ ಸೇರಿದಂತೆ ಹತ್ತು ಮಂದಿ ಭಾರತೀಯ ನಾವಿಕರಿದ್ದಾರೆ. ಶಿರಿಯಾ ಪ್ರಜೆ ಹಡಗಿನ ಕ್ಯಾಪ್ಟನ್ ಆಗಿದ್ದು, ಈ ಹಡಗು ನಾಲ್ಕು ತಿಂಗಳ ಹಿಂದೆ ಇರಾನ್ಗೆ ತಲುಪಿತ್ತು.
ಹಡಗಿನಲ್ಲಿ ಸಿಲುಕಿಕೊಂಡಿರುವ ಪುತ್ರನನ್ನು ರಕ್ಷಿಸಿ ಊರಿಗೆ ತಲುಪಿಸುವಂತೆ ಕೋರಿ ವೈಷ್ಣವ್ ತಂದೆ ಬಾಲಕೃಷ್ಣನ್ ತಮ್ಮ ಸಂಬಂಧಿಕರಾದ ಡಾ. ಆರ್.ಕೆ. ನಾಯರ್ರ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯ, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ನೋರ್ಕಾಗೆ ಮನವಿ ಸಲ್ಲಿಸಿದ್ದಾರೆ.

