ಕೊಚ್ಚಿ,: ಕಾಸರಗೋಡು ತಾಲೂಕಿನಲ್ಲಿ ಸರ್ಕಾರಿ ಪತ್ರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಅನುಮತಿಸಿರುವ 1982ರ ಸುತ್ತೋಲೆಯ ಅನುಷ್ಠಾನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಎರಡು ತಿಂಗಳೊಳಗೆ ಪರಿಶೀಲಿಸಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಾಸರಗೋಡು ಮೂಲದ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೌಮೇನ್ ಸೇನ್ ಹಾಗೂ ನ್ಯಾ. ಶ್ಯಾಮಕುಮಾರ ಅವರ ಪೀಠವು ಈ ನಿರ್ದೇಶನವನ್ನು ಹೊರಡಿಸಿದೆ.
ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳು ಮತ್ತು ಕಚೇರಿಗಳು ಕನ್ನಡದಲ್ಲಿರುವ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
1982ರ ಮಾರ್ಚ್ 5ರಂದು ಕಣ್ಣೂರು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯಲ್ಲಿ ಅಂದಿನ ಕಾಸರಗೋಡು ತಾಲೂಕನ್ನು ಕನ್ನಡ ಭಾಷಿಕ ಪ್ರದೇಶ ಎಂದು ಘೋಷಿಸಲಾಗಿದ್ದು, ಅಧಿಕೃತ ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಲಾಗಿತ್ತು.
ಸುತ್ತೋಲೆಯ ಅನುಷ್ಠಾನಕ್ಕಾಗಿ ಎಲ್ಲ ಸಂಬಂಧಿತ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಈ ವರ್ಷದ ಜನವರಿಯಲ್ಲಿ ಸರಕಾರಕ್ಕೆ ಅಹವಾಲು ಸಲ್ಲಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.
ನ್ಯಾಯಾಲಯವು ನಿರ್ದೇಶಿಸಿದರೆ ಸೂಕ್ತ ಪ್ರಾಧಿಕಾರವು ಅರ್ಜಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಸರಕಾರ ತಿಳಿಸಿದ ಬಳಿಕ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು.
ಈ ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ಎಂಟು ವಾರಗಳೊಳಗೆ ಅರ್ಜಿದಾರರಿಗೆ ತಮ್ಮ ಅಭಿಪ್ರಾಯ ಮಂಡನೆಗೆ ಸಮಂಜಸವಾದ ಅವಕಾಶ ನೀಡಿದ ಬಳಿಕ ಕಾನೂನಿನ ಪ್ರಕಾರ ಅರ್ಜಿಯನ್ನು ಪರಿಶೀಲಿಸಿ ನಿರ್ಧರಿಸಬೇಕು. ನಂತರ ಒಂದು ವಾರದೊಳಗೆ ಕಾರಣಸಹಿತ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

