ಭಾರತದಲ್ಲಿ 2026-27 ನೇ ಸಾಲಿನ ಜನಗಣತಿ ಆರಂಭವಾಗಿದೆ. ಈ ನಡುವೆ ಜನಗಣತಿ ಹೆಸರಿನಲ್ಲಿ ವಂಚಕರ ಜಾಲವೊಂದು ಜನರನ್ನು ಯಾಮಾರಿಸುತ್ತಿದೆ. ಗಣತಿಗೆ ಬಂದಿರುವವರಂತೆ ಮನೆ ಮನೆಗೆ ಹೋಗಿ ಮೋಸ ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗಣತಿಯ ಕುರಿತು ನಕಲಿ ಸಂದೇಶಗಳೂ ಹರಿದಾಡುತ್ತಿವೆ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ.
ಇವುಗಳನ್ನು ಕೇಳುವುದಿಲ್ಲ
ಬ್ಯಾಂಕ್ ವಿವರ: ಗಣತಿಗೆ ಬಂದ ಅಧಿಕಾರಿಗಳು ಎಂದಿಗೂ ಬ್ಯಾಂಕ್ ಖಾತೆ ಸಂಖ್ಯೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಯುಪಿಐ ಮಾಹಿತಿ ಅಥವಾ ಒಟಿಪಿ ಅಥವಾ ಜನಗಣತಿಯ ಹೆಸರಿನಲ್ಲಿ ಯಾವುದೇ ಡಿಜಿಟಲ್ ಒಪ್ಪಿಗೆ ಬಗ್ಗೆ ಕೇಳುವುದಿಲ್ಲ.
ಆಧಾರ್ ಮತ್ತು ಪ್ಯಾನ್ ಕಾರ್ಡ್ ಪ್ರತಿ: ವಂಚಕರು ಆಧಾರ್ ಅಥವಾ ಪ್ಯಾನ್ ಕಾರ್ಡ್ನ ಪ್ರತಿಗಳನ್ನು ಕೇಳಬಹುದು. ಆದರೆ ನಿಜವಾಗಿಯೂ ಗಣತಿಗೆ ಬರುವವರು ಎಂದಿಗೂ ಗುರುತಿನ ಚೀಟಿಗಳನ್ನು ಕೇಳುವುದಿಲ್ಲ.
ಹಣ ಅಥವಾ ದೇಣಿಗೆ: ಜನಗಣತಿ ನಡೆಸಲು ಯಾವುದೇ ಹಣ ಅಥವಾ ದೇಣಿಗೆ ಇಲ್ಲ. ಹೀಗಾಗಿ ಗಣತಿಯ ಅಧಿಕಾರಿಗಳು ಎಂದಿಗೂ ಹಣ ಪಾವತಿಸುವಂತೆ ಹೇಳುವುದಿಲ್ಲ.
ಪಾಸ್ವರ್ಡ್: ಗಣತಿಗೆ ಬರುವವರಿಗೆ ಯಾವುದೇ ಪಾಸ್ವರ್ಡ್ ಅಥವಾ ಒಟಿಪಿ ಅಗತ್ಯವಿರುವುದಿಲ್ಲ.
ಮನೆಯೊಳಗೆ ಬರುವುದಿಲ್ಲ: ಗಣತಿಗೆ ಬರುವವರಿಗೆ ಮನೆಯೊಳಗೆ ಬರುವ ಯಾವ ಅಗತ್ಯವೂ ಇರುವುದಿಲ್ಲ. ಹೀಗಾಗಿ ಮನೆಯೊಳಗೆ ಬಿಟ್ಟುಕೊಳ್ಳಬೇಡಿ.
ಆಯಪ್ಗಳು: ಗಣತಿದಾರರು ಯಾವುದೇ ಆಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಕೇಳುವುದಿಲ್ಲ ಅಥವಾ ಯಾವುದೇ ಲಿಂಕ್ ಓಪನ್ ಮಾಡುವಂತೆಯೂ ಹೇಳುವುದಿಲ್ಲ.
ಇವುಗಳ ಬಗ್ಗೆ ಎಚ್ಚರವಿರಲಿ
ಜನಗಣತಿದಾರರ ಸೋಗಿನಲ್ಲಿ ಮನೆಗೆ ಬಂದು ಛಿeಟಿsusbuಡಿeಚಿ(.)ಛಿom ಎನ್ನುವ ವೆಬ್ಸೈಟ್ಗೆ ಲಾಗಿನ್ ಆಗುವಂತೆ ಕೇಳಬಹುದು.
ಎಸ್ಎಂಎಸ್ ಅಥವಾ ಸೆಕ್ಯೂರಿಟಿ ಕೋಡ್ ಕಳಿಸುವ ಮೂಲಕ ಹ್ಯಾಕ್ ಮಾಡಲು ಯತ್ನಿಸಬಹುದು
ಸರ್ಕಾರಿ ಅಧಿಕಾರಿಗಳೆಂದುಕೊಂಡು ಗುರುತಿನ ಚೀಟಿ, ಬ್ಯಾಂಕ್ ಮಾಹಿತಿಯನ್ನು ಕೇಳಬಹುದು.
ಸ್ವಯಂ ಗಣತಿ ಪ್ರಕ್ರಿಯೆ
ಏಪ್ರಿಲ್ 1 ರಿಂದ ಸೆ.30ರವರೆಗೆ ನಡೆಯಲಿರುವ ಜನಗಣತಿಯಲ್ಲಿ ಮೊದಲ 15 ದಿನ ಸ್ವಯಂ ಗಣತಿಗೆ ಅವಕಾಶ ನೀಡಲಾಗಿತ್ತು. ಸ್ವಯಂ ಗಣತಿ ಮಾಡಲು 16 ಭಾಷೆಗಳಲ್ಲಿ ಅವಕಾಶ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಗಣತಿದಾರರು ಮನೆಗೆ ಭೇಟಿ ನೀಡುವ ಮೊದಲೇ ಆನ್ಲೈನ್ನಲ್ಲಿ ಸಾರ್ವಜನಿಕರು ಮಾಹಿತಿಯನ್ನು ತುಂಬುವ ಮೂಲಕ ಸ್ವಯಂ ಗಣತಿ ಮಾಡಬಹುದು ಎಂದು ಪಿಐಬಿ ಹೇಳಿದೆ.
se.census.gov.in ಪೋರ್ಟಲ್ ಮೂಲಕ ಮೊಬೈಲ್ ಸಂಖ್ಯೆ ಹಾಗೂ ಕೆಲವು ವಿವರಗಳನ್ನು ನಮೂದಿಸುವ ಮೂಲಕ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಬಹುದು.
ಗಣತಿದಾರರು ಮನೆ ಭೇಟಿಯ ವೇಳೆ, ಮನೆಯ ಪರಿಸ್ಥಿತಿ, ಮನೆಯಲ್ಲಿರುವ ಸೌಲಭ್ಯಗಳು ಸೇರಿದಂತೆ ಸರ್ಕಾರದ ಪ್ರಕಟಣೆಯಲ್ಲಿ ನಮೂದಿಸಿದ ಮಾಹಿತಿಯನ್ನು ಪಡೆಯುತ್ತಾರೆ. ಫೇಸ್ 1ರಲ್ಲಿ ಒಟ್ಟು 33 ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲ ಹಂತವನ್ನು ದೇಶದಾದ್ಯಂತ ಏಪ್ರಿಲ್ 1ರಿಂದ ಸೆ,30ರವರೆಗೆ ನಡೆಯಲಿದೆ.

