ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೊದಲ ದಿನ ನಟರಾಜ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಶುಕ್ರವಾರ ಸಂಜೆ ಜರಗಿತು. ಧಾರಾವಾಹಿ ನಟಿ ಆದಿರಾ ಲಕ್ಷಣ್ ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡಿದಾಗ ಮಾತ್ರ ಆತ ಪ್ರಬುದ್ಧ ಕಲಾವಿದನಾಗಿ ಪ್ರಸಿದ್ಧಿಯನ್ನು ಕಾಣಲು ಸಾಧ್ಯ. ಅನೇಕ ಧಾರ್ಮಿಕ ಕೇಂದ್ರಗಳು ಕಲೆಗೆ ಬೆಂಬಲವನ್ನು ನೀಡುತ್ತಿರುವುದು ಶ್ಲಾಘನೀಯ. ಬ್ರಹ್ಮಕಲಶೋತ್ಸವದ ಪುಣ್ಯಕಾರ್ಯದಲ್ಲಿ ಅದೆಷ್ಟೋ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡುತ್ತಿರುವುದು ಅಭಿಮಾನಕರ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ವಾಸ್ತುಶಿಲ್ಪಿ ಶ್ರೀ ಕೃಷ್ಣ ಪ್ರಸಾದ ಮುನಿಯಂಗಳ ಗೌರವ ಉಪಸ್ಥಿತರಿದ್ದು ಮಾತನಾಡಿದರು. ಪೆರಡಾಲ ನವಜೀವನ ಶಾಲಾ ಅಧ್ಯಾಪಕ ಉಳಿಯತ್ತಾಯ ನಾರಾಯಣ ಆಸ್ರ ಉಳಿಯ, ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಉದ್ಯಮಿ ಅರವಿಂದ ಪೈ ಬಳ್ಳಂಬೆಟ್ಟು, ಉದ್ಯಮಿ ಹರಿಪ್ರಸಾದ ರೈ ಪುತ್ರಕಳ, ಕಲರ್ಸ್ ಕನ್ನಡ ಕೋಗಿಲೆ ಗಾಯಕಿ ಕು. ಅಪೇಕ್ಷಾ ಪೈ ಬಳ್ಳಂಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ವಿಷ್ಣುಶರ್ಮ ನೂಜಿಲ, ಗಣೇಶ ಪ್ರಸಾದ ಕಡಪ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಸಾಂಸ್ಕøತಿಕ ಸಮಿತಿಯ ಪ್ರಧಾನ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಕಾರ್ಯನಿರ್ವಹಣಾ ಸಮಿತಿಯ ಅಧ್ಯಕ್ಷ ಉದಯ ಶಂಕರ ಪಟ್ಟಾಜೆ ನಿರೂಪಿಸಿದರು. ನಂತರ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ಹಾಗೂ ನೃತ್ಯಗುರು ಸೌರಮ್ಯ ಶೈಜು ಮಧೂರು ತಂಡದವರಿಂದ ನೃತ್ಯಾರ್ಚನೆ ಜರಗಿತು.
2 ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು :
ನಟರಾಜ ವೇದಿಕೆ ಹಾಗೂ ಕೈಲಾಸ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುತ್ತಿವೆ.
ಶ್ರೀ ಮಹಾದೇವ ಭಜನಾ ವೇದಿಕೆ :
ನಾಡಿನ ವಿವಿಧ ಭಜನಾ ತಂಡಗಳಿಂದ ಏಕಾಹ ಭಜನೆ ಶ್ರೀ ಮಹಾದೇವ ಭಜನಾ ವೇದಿಕೆಯಲ್ಲಿ ಜರಗುತ್ತಿದೆ. ದಿನಂಪ್ರತಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಭಜನಾ ತಂಡಗಳು ತಮ್ಮ ಸೇವೆಯನ್ನು ನೀಡುತ್ತಿವೆ.

.jpg)
.jpg)
