ಪುಣೆ: ಪಿಂಪ್ರಿ ಚಿಂಚವಾಡ ಹಾಗೂ ಪುಣೆ ನಗರದಲ್ಲಿ ವಿಷಮಿಶ್ರಿತ ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ.
ವಿಷಮಿಶ್ರಿತ ಮದ್ಯ ಪೂರೈಕೆ ಜಾಲದ ಪ್ರಮುಖ ಸೂತ್ರಧಾರ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.
ಪಿಂಪ್ರಿ ಚಿಂಚವಾಡ್ನ ಫುಗೇವಾಡಿ ಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದರೆ, ಪುಣೆಯ ಹಡಪಸರ್ನ ಪಂಧರೆ ಮಾಲಾ ಭಾಗದಲ್ಲಿ ಶಂಕಿತ ವಿಷಮಿಶ್ರಿತ ಮದ್ಯ ಸೇವಿಸಿ ಐವರು ಅಸುನೀಗಿದ್ದಾರೆ.
ವಿಷಮಿಶ್ರಿತ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವ ಮೂವರು ಪಿಂಪ್ರಿ ಚಿಂಚವಾಡ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ವಿಷಮಿಶ್ರಿತ ಮದ್ಯ ಪೂರೈಕೆ ಜಾಲ ಪತ್ತೆ ಹಚ್ಚಲಾಗಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.
'ತನಿಖೆ ಆರಂಭಿಸಿದ್ದೇವೆ. ನಿಖರ ಕಾರಣ ಖಚಿತಪಡಿಸುವ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದೇವೆ' ಎಂದು ಪಿಂಪ್ರಿ ಚಿಂಚವಾಡ್ನ ಪೊಲೀಸ್ ಉಪ ಆಯುಕ್ತ ಸಂದೀಪ್ ಅಟೋಲ್ ಮಾಹಿತಿ ನೀಡಿದ್ದಾರೆ.
'ಇಲಾಖೆಯು ತನಿಖೆ ಆರಂಭಿಸಿದೆ. ಎರಡೂ ಕಡೆಗೆ ವಿಷಪೂರಿತ ಮದ್ಯ ಪೂರೈಸಿದ್ದ ಯೋಗೇಶ್ ವಾಂಖೆಡೆ ಎಂಬಾತನನ್ನು ಬಂಧಿಸಿದ್ದು, ಪಿಂಪ್ರಿ ಚಿಂಚವಾಡ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ' ಎಂದು ಅಬಕಾರಿ ಆಯುಕ್ತ ಅತುಲ್ ಕನಾಡೆ ತಿಳಿಸಿದ್ದಾರೆ.
ಮದ್ಯ ತಯಾರಿಕಾ ಕೇಂದ್ರ ಧ್ವಂಸ
ಎನ್ಸಿಪಿ (ಶರದ್ ಬಣ) ಮುಖಂಡ ಶಾಸಕ ರೋಹಿತ್ ಪವಾರ್ ಹಾಗೂ ಇತರ ಪಕ್ಷಗಳ ಕಾರ್ಯಕರ್ತರು ಹಡಪಸರ್ನ ರಹಸ್ಯ ತಾಣದಲ್ಲಿದ್ದ ನಕಲಿ ಮದ್ಯ ತಯಾರಿಕಾ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ.
'ಅತ್ಯಂತ ಭಯಾನಕ ಘಟನೆಯಿದು. ಗೃಹ ಇಲಾಖೆಯ ಅನಿಯಂತ್ರಿತ ಮತ್ತು ಭ್ರಷ್ಟ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸಿದೆ' ಎಂದು ಸಾಮಾಜಿಕ ಮಾಧ್ಯಮದಲ್ಲಿ ರೋಹಿತ್ ಅವರು ದೂರಿದ್ದಾರೆ.
'ರಾಜ್ಯ ಸರ್ಕಾರವು ತಾಂತ್ರಿಕವಾಗಿ ಅಧಿಕಾರದಲ್ಲಿದೆಯಷ್ಟೇ. ಜನರ ನಂಬಿಕೆಯನ್ನು ಕಳೆದುಕೊಂಡಿದೆ' ಎಂದಿದ್ದಾರೆ.

