ನವದೆಹಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಳಿಕ 2002ರಲ್ಲಿ ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಅಪರಾಧಿಯೊಬ್ಬನನ್ನು 24 ವರ್ಷಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ.
'ಅಪರಾಧಿ ರಾಕೇಶ್ ಪಟೇಲ್ ಅಲಿಯಾಸ್ ಪಪ್ಪಿ ತನ್ನ ಗುರುತನ್ನು ಬದಲಿಸಿಕೊಂಡು, ನಂದಲಾಲ್ ವರ್ಮ ಎಂಬ ಹೆಸರಿನಲ್ಲಿ ಪ್ರಯಾಗರಾಜ್ನಲ್ಲಿ ನೆಲಸಿದ್ದ.
ಅಲ್ಲಿಯೇ ಆಟೊ ಬಿಡಿಭಾಗಗಳ ಅಂಗಡಿ ಇಟ್ಟುಕೊಂಡಿದ್ದ' ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ರಾಕೇಶ್ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ನೆರೆಮನೆಯ ವ್ಯಕ್ತಿಯನ್ನು 1990ರಲ್ಲಿ ಹತ್ಯೆ ಮಾಡಿದ್ದ. 1995ರಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2002ರಲ್ಲಿ ತನಗೆ ಎರಡನೇ ಮಗು ಹುಟ್ಟಿದ ಕಾರಣಕ್ಕೆ ಎರಡನೇ ಬಾರಿಗೆ ಪೆರೋಲ್ ಪಡೆದು ಹೊರಬಂದಿದ್ದ ರಾಕೇಶ್ ಬಳಿಕ ಜೈಲಿಗೆ ವಾಪಸ್ ಆಗಿರಲಿಲ್ಲ.
'ಆರಂಭದಲ್ಲಿ ತಾನು ನಂದಲಾಲ್ ಎಂದು ಹೇಳಿ ರಾಕೇಶ್ ಪೊಲೀಸರಿಗೆ ಮೋಸ ಮಾಡಲು ಯತ್ನಿಸಿದ್ದ. ತೀವ್ರ ವಿಚಾರಣೆಯ ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

