ತಮಿಳುನಾಡು, ಕೇರಳಂ, ಪ.ಬಂಗಾಳ
ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಮತಗಳು ಬಿದ್ದಾಗಲೇ ಹೊಸ ಅಧಿಕಾರದ ಮುನ್ಸೂಚನೆ ಇದು ಎಂಬುದು ಬಹುತೇಕರಿಗೆ ತಿಳಿಯಿತು. ಆದರೂ ಸಹ ಅಧಿಕೃತ ಫಲಿತಾಂಶ ಏನು ಹೇಳುತ್ತೆ ಎಂಬುದನ್ನು ಕಾದು ನೋಡಲು ತುದಿಗಾಲಿನಲ್ಲಿದ್ದರು. ಅಂತೆಯೇ, ಈಗ ಹೊರಬಿದ್ದಿರುವ ಪಂಚರಾಜ್ಯ ಚುನಾವಣೆಯಲ್ಲಿ ಹತ್ತತ್ತು ವರ್ಷಗಳ ಕಾಲ ಅಧಿಕಾರ ಮೆರೆದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇರಳಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭಾರೀ ಅಂತರದ ಸೋಲು ಸಿಕ್ಕಿರುವುದು ಸದ್ಯ ಆಯಾ ರಾಜ್ಯಗಳಲ್ಲಿ ಹೊಸ ಅಧಿಕಾರದ ಮುನ್ಸೂಚನೆಯನ್ನು ನೀಡಿವೆ.ಬಂಗಾಳದಲ್ಲಿ ಅರಳಿದ ಕಮಲ
ವಿವರವಾಗಿ ತಿಳಿಯುವುದಾದರೆ, ಒಂದು ಪೂರ್ವದಲ್ಲಿದೆ ಮತ್ತು ಇನ್ನೆರಡು ದಕ್ಷಿಣದಲ್ಲಿದೆ. ಈ ಬಾರಿ, ಆಯಾ ನಾಯಕರು ವರ್ಷಗಳಲ್ಲಿ ನಿರ್ಮಿಸಿದ್ದ ಭದ್ರಕೋಟೆಗಳು ಚುನಾವಣೆಯಲ್ಲಿ ಕುಸಿದಿವೆ. ಇದು ಆಯಾ ಸರ್ಕಾರಗಳ ವಿರುದ್ಧ ಜನರಲ್ಲಿನ ವಿರೋಧವೇ ಎಂಬ ಬಲವಾದ ಸೂಚನೆಗಳು ಲಭಿಸಿವೆ. 15 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ತನ್ನ ಭದ್ರಕೋಟೆಯಗೆ ಒಂದೇ ಒಂದು ಕಲ್ಲು ತಾಕದಂತೆ ನೋಡಿಕೊಂಡಿದ್ದ ಮಮತಾ ಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.ಗಂಭೀರ ಆರೋಪ
ಸತತ ಮೂರು ಅವಧಿಗೆ ಟಿಎಂಸಿಯನ್ನು ಅಧಿಕಾರಕ್ಕೆ ತಂದ ಮಮತಾ, ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಎಡವಿದ್ದಾರೆ. ಇದಕ್ಕೆ ಅವರ ವಿರುದ್ಧ ಕೇಳಿಬಂದ ಸಾಲು ಸಾಲು ಆರೋಪಗಳು ಸೋಲಿಗೆ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಆರ್.ಜಿ ಕರ್ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣ ಬಂಗಾಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ರೇಪ್ಗೆ ಬಲಿಯಾದ ಯುವತಿಯ ತಾಯಿ ಮಮತಾ ಸರ್ಕಾರದ ವಿರುದ್ಧ ಹೊರಿಸಿದ ಗಂಭೀರ ಆರೋಪಗಳು ಅಲ್ಲಿನ ಮತದಾರರ ದಿಕ್ಕನ್ನು ಬದಲಿಸಿತು ಎಂದೇ ಹೇಳಬಹುದು. ಹೀಗಾಗಿ, ಈ ಬಾರಿ ಟಿಎಂಸಿ ಪಕ್ಷವನ್ನು ದೂರವಿಟ್ಟರು ಎಂಬುದಕ್ಕೆ ಭಾರೀ ಅಂತರದ ಗೆಲುವೇ ಸಾಕ್ಷಿ ಎನ್ನಬಹುದು. ಇದರೊಟ್ಟಿಗೆ ಫುಟ್ಬಾಲ್ ದಂತಕಥೆ ಲಿಯೋನಲ್ ಮೆಸ್ಸಿ ಬಂಗಾಳಕ್ಕೆ ಆಗಮಿಸಿದಾಗ, ಸರಿಯಾದ ವ್ಯವಸ್ಥೆ ಮಾಡದೆ, ಕ್ರೀಡಾಂಗಣದಲ್ಲಿ ದೊಡ್ಡ ಗಲಾಟೆ ಭುಗಿಲೆದ್ದ ಕಾರಣ, ಆಡಳಿತರೂಢ ಪಕ್ಷದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಸೋಲಿಗೆ ಇದೂ ಕೂಡ ಒಂದು ಕಾರಣವಾಗಿರಬಹುದು.ಪಿಣರಾಯಿಗೆ ಭಾರೀ ಮುಖಭಂಗ
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಶೇ.92ಕ್ಕೂ ಅಧಿಕ ಮತದಾನ ದಾಖಲಾಗಿದೆ. ಹತ್ತು ವರ್ಷಗಳಿಂದ ವಿರೋಧ ಪಕ್ಷವಾಗಿಯೇ ಪಶ್ಚಿಮ ಬಂಗಾಳದ ಜನರಿಗೆ ಪರಿಚಿತವಾಗಿದ್ದ ಬಿಜೆಪಿ, 2026ರ ಚುನಾವಣೆಯಲ್ಲಿ ಬರೋಬ್ಬರಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪ್ರಥಮ ಬಾರಿಗೆ, ಬಂಗಾಳದ ಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಿದೆ.ಇನ್ನು ದಕ್ಷಿಣ ರಾಜ್ಯಗಳ ವಿಷಯಕ್ಕೆ ಬರುವುದಾದರೆ, ಒಂದು ಕಾಲದಲ್ಲಿ ಕಮ್ಯುನಿಸ್ಟರ ಭದ್ರಕೋಟೆ ಈಗ ನೆಲಕ್ಕೆ ಉರುಳಿದೆ. ಮೊದಲು ಬಂಗಾಳದಲ್ಲಿ, ನಂತರ ತ್ರಿಪುರದಲ್ಲಿ ಮತ್ತು ಈಗ ಕೇರಳದಲ್ಲಿ ಈ ಬದಲಾವಣೆ ಕಂಡುಬಂದಿದೆ. ಕೇರಳಂನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಎರಡು ಬಾರಿ ಗೆಲುವು ನೀಡಿದ ಸಂದರ್ಭಗಳಿವೆ. ಕಮ್ಯುನಿಸ್ಟರಿಗೆ ಆ ಅವಕಾಶ ನೀಡಲಾಗಿಲ್ಲ. ಸತತ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಪಿಣರಾಯಿ ವಿಜಯನ್ ಹ್ಯಾಟ್ರಿಕ್ ಮೇಲೆ ಕಣ್ಣಿಟ್ಟಿದ್ದರು. ಆದರದು ಕನಸಾಗಿಯೇ ಉಳಿದಿದ್ದು ಆಶ್ಚರ್ಯಕರ ಬೆಳವಣಿಗೆ. ಚಿನ್ನದ ವಿವಾದವೇ ಕಮ್ಯುನಿಸ್ಟ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು ಎಂದೇ ಹೇಳಬಹುದು.
ಒಂದು ಕಡೆ ಯುಡಿಎಫ್ ಮತ್ತು ಇನ್ನೊಂದೆಡೆ ಬಿಜೆಪಿಯಿಂದ ನಕಾರಾತ್ಮಕ ಮತಬ್ಯಾಂಕ್ ವಿಭಜನೆಯಾಗುತ್ತದೆ ಎಂದು ಸಿಎಂ ವಿಜಯನ್ ಭಾವಿಸಿದ್ದರು. ಆದರೆ, ಅಂದುಕೊಂಡಂತೆ ಯಾವುದು ನಡೆದಿಲ್ಲ. ಕಳೆದ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿದ್ದ ಕಮ್ಯುನಿಸ್ಟ್ ನೇತೃತ್ವದ ಎಲ್ಡಿಎಫ್, ಈ ಬಾರಿ 33 ಸ್ಥಾನಗಳಿಗೆ ಕುಸಿದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಅನಿರೀಕ್ಷಿತ ಬಹುಮತ ನೀಡಲಾಗಿದೆ. 140 ಸ್ಥಾನಗಳನ್ನು ಹೊಂದಿರುವ ಕೇರಳ ವಿಧಾನಸಭೆಯಲ್ಲಿ ಮ್ಯಾಜಿಕ್ ಫಿಗರ್ 71 ಸ್ಥಾನ. ಯುಡಿಎಫ್ 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದು ಗಮನಾರ್ಹ.
ದ್ರಾವಿಡ ರಾಜಕೀಯಕ್ಕೆ ಫುಲ್ಸ್ಟಾಪ್
ತಮಿಳುನಾಡು ದ್ರಾವಿಡ ರಾಜಕೀಯಕ್ಕೆ ಯಾವುದೇ ಶಾಪ ತಟ್ಟಿದಂತಾಗಿದೆ. ಈ ಬಾರಿ, ಅಲ್ಲಿನ ಮತದಾರರು ವಿಶಿಷ್ಟ ತೀರ್ಪು ನೀಡಿರುವುದು ನಿಜಕ್ಕೂ ಗಮನಾರ್ಹ. ಪ್ರಪ್ರಥಮ ಬಾರಿಗೆ ವಿರೋಧ ಪಕ್ಷವಾದ ಎಐಎಡಿಎಂಕೆ ಮತ್ತು ಅಧಿಕಾರದಲ್ಲಿದ್ದ ಡಿಎಂಕೆಯನ್ನು ದೂರವಿಟ್ಟಿರುವ ತಮಿಳುನಾಡಿನ ಜನತೆ, ನಟ ಮತ್ತು ಟಿವಿಕೆ ಪಕ್ಷದ ಅಧಿಪತಿ ವಿಜಯ್ಗೆ ದಾಖಲೆಯ ಮತ ನೀಡುವ ಮೂಲಕ ಅವರ ಚೊಚ್ಚಲ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ.ಒಂದು ರೀತಿಯಲ್ಲಿ ತಮಿಳು ಮತದಾರರು ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದ್ದಾರೆ. ಸ್ಟಾಲಿನ್ ಆಳ್ವಿಕೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿ ಹೆಚ್ಚಾಗಿದೆ ಎಂದು ಅಲ್ಲಿನ ಜನರು ಸಿಡಿದೆದ್ದಿದ್ದಾರೆ. ಅದನ್ನು ತಡೆಯಲು ವಿಫಲವಾದ ಕಾರಣ ಮತದಾರರು ಆಡಳಿತ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. 234 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಮ್ಯಾಜಿಕ್ ಫಿಗರ್ 118. ಆದಾಗ್ಯೂ, ವಿಜಯ್ ಅವರ ಟಿವಿಕೆ 108 ಸ್ಥಾನಗಳಿಗೆ ಸನ್ನಿಹಿತವಾಗಿದೆ. ಮ್ಯಾಜಿಕ್ ಫಿಗರ್ಗಿಂತ ಇನ್ನೂ 10 ಸ್ಥಾನಗಳ ಕೊರತೆ ಕಾಡತೊಡಗಿದೆ.
ಅದೇ ಸಮಯದಲ್ಲಿ, ಡಿಎಂಕೆ ಮತ್ತು ಎಐಎಡಿಎಂಕೆಯ ವಿಜೇತ ಅಭ್ಯರ್ಥಿಗಳು ಟಿವಿಕೆ ಪಕ್ಷವನ್ನು ಸೇರಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಸದ್ಯ ತಮಿಳುನಾಡು ಚುನಾವಣಾ ಕಣದಲ್ಲಿ ಜೋರಾಗಿವೆ. ಒಟ್ಟಾರೆಯಾಗಿ, ಐದು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಮೂವರು ಮುಖ್ಯಮಂತ್ರಿಗಳು ತಮ್ಮ ಕುರ್ಚಿಯನ್ನು ಬಿಟ್ಟು ಹೊರಬರಬೇಕಾದ ಸನ್ನಿವೇಶಗಳು ಸದ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

