ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಮೊದಲ ಹಂತದಲ್ಲಿ ಭಾರಿ ಮತದಾನವಾಗಿದ್ದು, ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಬಂಗಾಳದ ಜನತೆ 'ದೀದಿ' ಆಡಳಿತವನ್ನು ಕಿತ್ತೊಗೆಯಲಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಕಣದಲ್ಲಿರುವ 152 ಕ್ಷೇತ್ರಗಳ ಪೈಕಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಬೃಹತ್ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಶಾ ಹೇಳಿದ್ದರು. "ದೀದಿ ಆಡಳಿತ ಅಂತ್ಯವಾಗಲಿದೆ, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಂಗಾಳದ ಮುಂದಿನ ಮುಖ್ಯಮಂತ್ರಿ ಬಂಗಾಳಿಯೇ ಆಗಿರುತ್ತಾರೆ. ಅವರು ಬಂಗಾಳದ ಮಣ್ಣಿನ ಮಗನಾಗಿರುತ್ತಾರೆ, ಬಂಗಾಳಿ ಭಾಷೆ ಮಾತನಾಡುತ್ತಾರೆ. ಆದರೆ, ಅವರು ಟಿಎಂಸಿ ನಾಯಕರಾಗಿರದೆ, ಕಮಲ ಪಾಳಯದ ಕಾರ್ಯಕರ್ತನಾಗಿರುತ್ತಾರೆ" ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದರು. ಇದೀಗ ದಕ್ಷಿಣ ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಗೆದ್ದು ದಿದಿ ಆಡಳಿತ ಕೊನೆಗೊಳಿಸಿದ್ದಾರೆ.
ಅಮಿತ್ ಶಾ ಅವರು ನೇರವಾಗಿ ಸುವೇಂದು ಅಧಿಕಾರಿ ಅವರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸುವೇಂದು ಅಧಿಕಾರಿ ಅವರೇ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸುವೇಂದು ಅಧಿಕಾರಿ ಅವರ ಜಾತಿ, ಕುಟುಂಬ ಮತ್ತು ಅವರ ಇದುವರೆಗಿನ ರಾಜಕೀಯ ಪಯಣದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರಿವರು ಸುವೇಂದು ಅಧಿಕಾರಿ?
ಸುವೇಂದು ಅಧಿಕಾರಿ ಪ್ರಸ್ತುತ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಪ್ರಮುಖ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬಿಜೆಪಿಗೆ ಸೇರುವ ಮೊದಲು, ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಭಾವಿ ನಾಯಕರಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಹಾದಿ ಸವೆಸಿರುವ ಬಿಜೆಪಿ ಹಿರಿಯ ನಾಯಕ ಸುವೇಂದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ. ಇದರ ಜೊತೆಗೆ, ತಮ್ಮ ಭದ್ರಕೋಟೆಯಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದಲೂ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದರು.
ಸುವೇಂದು ಅಧಿಕಾರಿ ಅವರ ಕುಟುಂಬದ ಪರಿಚಯ
ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಕಾಂಥಿಯಲ್ಲಿ ಡಿಸೆಂಬರ್ 15, 1970 ರಂದು ಜನಿಸಿದರು. ಇದು ರಾಜಕೀಯ ಹಿನ್ನೆಲೆಯುಳ್ಳ ಅತ್ಯಂತ ಪ್ರಭಾವಿ ಕುಟುಂಬವಾಗಿದೆ. ಅವರ ತಂದೆ, ಹಿರಿಯ ರಾಜಕಾರಣಿ ಶಿಶಿರ್ ಅಧಿಕಾರಿ ಈ ಹಿಂದೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿಯ ಹೆಸರು ಗಾಯತ್ರಿ ಅಧಿಕಾರಿ. ಸುವೇಂದು ಅವರ ಸಹೋದರರಾದ ದಿಬ್ಯೇಂದು ಅಧಿಕಾರಿ ಮತ್ತು ಸೌಮೇಂದು ಅಧಿಕಾರಿ ಕೂಡ ರಾಜಕೀಯದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಈ 'ಅಧಿಕಾರಿ' ಕುಟುಂಬವು ತನ್ನದೇ ಆದ ಆಳವಾದ ಬೇರುಗಳನ್ನು ಹೊಂದಿದೆ.
ಸುವೇಂದು ಅಧಿಕಾರಿ ಅವರ ಜಾತಿ ಯಾವುದು?
ಸುವೇಂದು ಅಧಿಕಾರಿ ಅವರು ಹಿಂದೂ ಧರ್ಮವನ್ನು ಪಾಲಿಸುತ್ತಾರೆ. ಚುನಾವಣಾ ಅಫಿಡವಿಟ್ ಪ್ರಕಾರ ಅವರು ಸಾಮಾನ್ಯ ವರ್ಗಕ್ಕೆ ಬರುತ್ತಾರೆ. ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರದ ಪ್ರಮುಖ 'ಅಧಿಕಾರಿ' ಕುಟುಂಬದಿಂದ ಬಂದಿರುವ ಸುವೇಂದು, ಅಲ್ಲಿನ ಪ್ರಭಾವಿ 'ಮಹಿಷ್ಯ' (Mahishya) ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಈ ಸಮುದಾಯವು ಪ್ರಮುಖವಾಗಿ 'ಕೃಷಿಕರು' ಮತ್ತು 'ಭೂಮಾಲೀಕರು' ಎಂದು ಗುರುತಿಸಿಕೊಂಡಿದೆ. ಅವರ ತಂದೆ ಶಿಶಿರ್ ಅಧಿಕಾರಿ ಕೂಡ ಇದೇ ಪ್ರದೇಶದ ಹಿರಿಯ ನಾಯಕರಾಗಿದ್ದಾರೆ.
ಸುವೇಂದು ಅಧಿಕಾರಿ "ಬ್ರಾಹ್ಮಣ"ರೇ?
2020ರ ಕಾರ್ಯಕ್ರಮವೊಂದರಲ್ಲಿ ಸುವೇಂದು ಅಧಿಕಾರಿ ತಾವು "ಬ್ರಾಹ್ಮಣ" ಕುಟುಂಬಕ್ಕೆ ಸೇರಿದವರು ಎಂದು ಕೂಡ ಹೇಳಿಕೊಂಡಿದ್ದರು. ಒಂದು ಕಾಲದಲ್ಲಿ ಅವರು ಟಿಎಂಸಿ ಪ್ರತಿನಿಧಿಯಾಗಿ ಸನಾತನ ಬ್ರಾಹ್ಮಣ ಟ್ರಸ್ಟ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಟಿಎಂಸಿ ತೊರೆದು ಬಿಜೆಪಿ ಸೇರಿದಾಗ, ರಾಜ್ಯ ಸನಾತನ ಬ್ರಾಹ್ಮಣ ಟ್ರಸ್ಟ್ನಿಂದ ಅವರನ್ನು ಉಚ್ಚಾಟಿಸಲಾಗಿತ್ತು. ಆದಾಗ್ಯೂ, ಭೌಗೋಳಿಕ ಮತ್ತು ಸಾಮಾಜಿಕವಾಗಿ ಅವರ ಕುಟುಂಬವು ಪೂರ್ವ ಮೇದಿನಿಪುರದ ಪ್ರಭಾವಿ 'ಮಹಿಷ್ಯ' ವರ್ಗದ ಭಾಗವೆಂದೇ ವ್ಯಾಪಕವಾಗಿ ಪರಿಗಣಿಸಲಾಗಿದೆ.
ಸುವೇಂದು ಅಧಿಕಾರಿ ಅವರ ಶಿಕ್ಷಣ
ಸುವೇಂದು ಅಧಿಕಾರಿ ಅವರು ನ್ಯೂ ಬ್ಯಾರಕ್ಪುರದ ಆಚಾರ್ಯ ಪ್ರಫುಲ್ಲ ಚಂದ್ರ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ (ಬಿ.ಎ) ಪಡೆದಿದ್ದಾರೆ. ತದನಂತರ, ಕೋಲ್ಕತ್ತಾದ ಪ್ರತಿಷ್ಠಿತ ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಎಂ.ಎ) ವ್ಯಾಸಂಗವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಸುವೇಂದು ಅಧಿಕಾರಿ ಅವರ ರಾಜಕೀಯ ವೃತ್ತಿಜೀವನ
1. ಏಪ್ರಿಲ್ 2026ರ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಭವಾನಿಪುರ ಮತ್ತು ನಂದಿಗ್ರಾಮ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ, ಅವರು ಬಿಜೆಪಿಯ ಹಿರಿಯ ನಾಯಕ, ನಂದಿಗ್ರಾಮದ ಶಾಸಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಥಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.
2. 2021ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಮಣಿಸಿದ್ದರು. ಈ ನಿರ್ಣಾಯಕ ಗೆಲುವಿನ ನಂತರ ಅವರು ವಿಪಕ್ಷ ನಾಯಕರಾದರು. ಅದಕ್ಕೂ ಮುನ್ನ, ಡಿಸೆಂಬರ್ 2020ರಲ್ಲಿ ದೀದಿ ವಿರುದ್ಧ ಬಂಡಾಯವೆದ್ದು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.
3. ಕಾಂಥಿ ಪ್ರತಾಪನಾರಾಯಣ ವಿದ್ಯಾಮಂದಿರದಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಪ್ರವೇಶಿಸಿದ ಅವರು, ಮಿಡ್ನಾಪುರ ಯುವ ಕಾಂಗ್ರೆಸ್ನಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
4. 1998ರಲ್ಲಿ ಮಮತಾ ಬ್ಯಾನರ್ಜಿ ಜೊತೆಗೂಡಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸ್ಥಾಪಕ ಸದಸ್ಯರಾಗುವ ಮೂಲಕ, ಅವರ ರಾಜಕೀಯ ಜೀವನವು ಹೊಸ ತಿರುವು ಪಡೆಯಿತು.
5. 2006-2009ರವರೆಗೆ ಕಾಂಥಿ ದಕ್ಷಿಣದ ಶಾಸಕರಾಗಿದ್ದ ಅವರು, 2009-2021ರವರೆಗೆ ನಂದಿಗ್ರಾಮದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. 2014-2016ರ ಅವಧಿಯಲ್ಲಿ ತಮ್ಲುಕ್ ಕ್ಷೇತ್ರದಿಂದ ಸಂಸದರಾಗಿದ್ದರು. ಟಿಎಂಸಿ ಸರ್ಕಾರದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಆಡಳಿತಗಾರ ಎನಿಸಿಕೊಂಡಿದ್ದರು.
ಸುವೇಂದು ಅಧಿಕಾರಿ ಮೇಲಿರುವ ವಿವಾದಗಳು
ಸುವೇಂದು ಅಧಿಕಾರಿ ಅವರ ರಾಜಕೀಯ ಹಾದಿ ವಿವಾದಗಳಿಂದ ಹೊರತಾಗಿಲ್ಲ. ಶಾರದಾ ಚಿಟ್ಫಂಡ್ ಹಗರಣ ಮತ್ತು ನಾರದ ಸ್ಟಿಂಗ್ ಆಪರೇಷನ್ನಂತಹ ರಾಜ್ಯ ರಾಜಕಾರಣವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣಗಳಲ್ಲಿ ಇವರ ಹೆಸರು ಕೇಳಿಬಂದಿತ್ತು. ಈ ವಿವಾದಗಳ ನಡುವೆಯೂ ಅವರು ತಮ್ಮದೇ ಆದ ಪ್ರಭಾವವನ್ನು ಬೆಳೆಸಿಕೊಂಡು ರಾಜ್ಯ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.

