ತಿರುವನಂತಪುರ: ಕೇರಳಂ ಮತ್ತು ಮಾಹೆಯ ಹಲವೆಡೆ ಮುಂದಿನ ಐದು ದಿನ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಮಂಗಳವಾರ 9 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್' ಘೋಷಿಸಿದೆ.
'ಆಂಧ್ರ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಂಡಮಾರುತ ಬೀಸಲಿರುವ ಕಾರಣ ಕೇರಳಂ, ಕರ್ನಾಟಕದ ದಕ್ಷಿಣ ಭಾಗ, ರಾಯಲಸೀಮೆಯಲ್ಲಿ ಮಳೆಯಾಗಲಿದೆ' ಎಂದು ಐಎಂಡಿ ತಿಳಿಸಿದೆ.
ಕೇರಳಂನ ಹಲವು ಭಾಗಗಳಲ್ಲಿ ಸೋಮವಾರವೂ ಮಳೆ ಸುರಿದಿದ್ದು, ಎರಡು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು 10 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್' ಘೋಷಿಸಲಾಗಿತ್ತು.
ಮೇ 26ಕ್ಕೆ ಕೇರಳಂಗೆ ನೈರುತ್ಯ ಮುಂಗಾರು ಪ್ರವೇಶವಾಗುವ ಬಗ್ಗೆ ಐಎಂಡಿ ತಿಳಿಸಿದ್ದು, ಆಗ್ನೇಯ ಅರಬ್ಬಿ ಸಮುದ್ರ ಮತ್ತು ಕನ್ಯಾಕುಮಾರಿ ಪ್ರದೇಶದ ಹಲವೆಡೆಗೆ ನೈರುತ್ಯ ಮುಂಗಾರು ನಿಗದಿತ ಅವಧಿಗಿಂತ ಮುಂಚಿತವಾಗಿ ಪ್ರವೇಶಿಸಿದೆ.

