ನವದೆಹಲಿ: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗಾಗಿ (ಬಿಎಂಐಸಿಪಿ) ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ ಲಿಮಿಟೆಡ್ (ನೈಸ್) ಪಾವತಿಸಬೇಕಾದ ಭೂಪರಿಹಾರವನ್ನುಪ್ರತಿ ಚದರ ಅಡಿಗೆ ₹1,000ದಿಂದ ₹500ಕ್ಕೆ ಇಳಿಸಿದ್ದ ಕರ್ನಾಟಕ ಹೈಕೋರ್ಟ್ನ 2012ರ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರು 2012ರಲ್ಲಿ ನೀಡಿದ್ದ ಆದೇಶವನ್ನು ಮಾರ್ಪಡಿಸಿದ್ದ ಹೈಕೋರ್ಟ್ನ ತೀರ್ಪಿನ ವಿರುದ್ಧ ಬಿ.ಗುರಪ್ಪ ನಾಯ್ಡು ಮತ್ತು ಸುನೀತಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಪುರಸ್ಕರಿಸಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಗ್ರಾಮದ ಒಟ್ಟು 3 ಎಕರೆ 6 ಗುಂಟೆ ಜಾಗಕ್ಕೆ ಪ್ರತಿ ಚದರ ಅಡಿಗೆ ₹1,000 ನಿಗದಿಪಡಿಸಿ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
'ಪ್ರಸ್ತುತ ಪ್ರಕರಣದಲ್ಲಿ ಹೈಕೋರ್ಟ್ ಮೇಲ್ಮನವಿ ನ್ಯಾಯಾಲಯದ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸಂವಿಧಾನದ 227ನೇ ವಿಧಿಯ ಮೇಲ್ವಿಚಾರಣಾ ನ್ಯಾಯ ವ್ಯಾಪ್ತಿಯಲ್ಲಿ ಇದು ಸ್ವೀಕಾರಾರ್ಹವಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿದೆ.
'ಈ ಆದೇಶದ ಮೂಲಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತನ್ನದೇ ಅಧಿಸೂಚನೆಯನ್ನು ಮರುವ್ಯಾಖ್ಯಾನಿಸಲು ಮತ್ತು ಖಾಸಗಿ ಕಂಪನಿಗಳ ಮೇಲೆ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟಿದೆ' ಎಂದು ಪೀಠ ಹೇಳಿದೆ. ಈ ಅಧಿಸೂಚನೆಯಲ್ಲಿ ಬಿಬಿಎಂಪಿ ಮತ್ತು ನಗರ, ಪುರಸಭೆಗಳ ವ್ಯಾಪ್ತಿಗೆ ಬರುವ ನಿವೇಶನಗಳ ಮೌಲ್ಯವನ್ನು ಪ್ರತಿ ಚದರ ಅಡಿಗೆ ₹800 ನಿಗದಿಪಡಿಸಲಾಗಿದೆ. ಷೆಡ್ಯೂಲ್ ಭೂಮಿಯನ್ನು ಅಧಿಸೂಚನೆಯ ಅಡಿಯಲ್ಲಿ ಸೇರಿಸಲಾಗಿದೆ. ಪರಿಣಾಮ ವಾಗಿ, ಮೊದಲು ಮೂಲ ಮಾರ್ಗಸೂಚಿ ಅಡಿಯಲ್ಲಿ ₹800 ಇದ್ದ ಪ್ರತಿ ಚದರ ಅಡಿ ಭೂಮಿಯ ಬೆಲೆ ಈಗ ಹೆಚ್ಚಾಗಲಿದೆ. ಅಧಿಸೂಚನೆಯ ಸೂಚನೆ ಸಂಖ್ಯೆ 2 ಅನ್ವಯದ ನಂತರ, ಮೂಲ ಮೌಲ್ಯಕ್ಕೆ ಹೆಚ್ಚುವರಿ ಶೇ 25 ಸೇರ್ಪಡೆಯಾಗಲಿದೆ.ಅದರ ಪ್ರಕಾರ, ಚದರ ಅಡಿಯ ಬೆಲೆ ₹800ರಿಂದ ₹1,000 ಆಗಲಿದೆ ಎಂದು ಪೀಠ ಹೇಳಿದೆ.
ಷೆಡ್ಯೂಲ್ ಭೂಮಿಗೆ ಸಂಬಂಧಿಸಿದಂತೆ ಪ್ರತಿ ಚದರ ಅಡಿಗೆ ₹500 ಪರಿಹಾರ ನಿರ್ಧರಿಸುವುದರ ವಿರುದ್ಧ ನೈಸ್ ಸಲ್ಲಿಸಿದ್ದ ಸಿವಿಲ್ ಮೇಲ್ಮನವಿ ಯನ್ನು ನ್ಯಾಯಪೀಠ ವಜಾಗೊಳಿಸಿತು.
'ಪ್ರತಿ ಚದರ ಅಡಿಗೆ ₹1,000 ಪ್ರಕಾರ, ಭೂಮಾಲೀಕರಿಗೆ ನೈಸ್ ₹13.72 ಕೋಟಿ ಪಾವತಿಸಬೇಕಿದೆ. ಈ ಪೈಕಿ, ₹4.92 ಕೋಟಿ ಈಗಾಗಲೇ ನೀಡಲಾಗಿದೆ. ಉಳಿದ ₹8.79 ಕೋಟಿಯನ್ನು ಶೇ 6 ಬಡ್ಡಿ ಸೇರಿಸಿ ಪಾವತಿಸಬೇಕು' ಎಂದು ಪೀಠ ನಿರ್ದೇಶನ ನೀಡಿದೆ.
ಭೂಮಾಲೀಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ವಿಶ್ವನಾಥ ಶೆಟ್ಟಿ, 'ಕರ್ನಾಟಕ ಸರ್ಕಾರದ 2007ರ ಅಧಿಸೂಚನೆಯ ಪ್ರಕಾರ, ಪ್ರತಿ ಚದರ ಅಡಿಗೆ ₹1,000 ಮಾರುಕಟ್ಟೆ ಮೌಲ್ಯ ನಿಗದಿಪಡಿಸಿದ ಅಧೀನ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಿ ಹೈಕೋರ್ಟ್ ತಪ್ಪು ಮಾಡಿದೆ' ಎಂದರು.

