ಮಂಜೇಶ್ವರ: ಕೇರಳದ ನೂತನ ಐಕ್ಯರಂಗ ಸರ್ಕಾರ ಮಹಿಳೆಯರಿಗೆ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ನೀಡಲು ಮುಂದಾಗಿರುವ ಉಚಿತ ಪ್ರಯಾಣದ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ಮಹಿಳೆಯರಿಗೆ ಪ್ರಯೋಜನಪ್ರದವಾಗುವುದು ಸಂಶಯಕರವಾಗಿದ್ದು, ಜಿಲ್ಲೆಯ ಬಹುತೇಕ ಮಹಿಳೆಯರು ಇದರಿಂದ ವಂಚಿತವಾಗುವ ಸಾಧ್ಯತೆಯಿರುವುದಾಗಿ ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ. ಮಣಿಕಂಠ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂತಾರಾಜ್ಯ ಪ್ರಯಾಣದ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕಾಸರಗೋಡು ಜಿಲ್ಲೆಯ ಗಡಿ ಭಾಗದ ಜನರಿಗೆ ಅನುಕೂಲ ಆಗುವಂತೆ, ಅವರು ಹೆಚ್ಚು ಬಳಸುವ ಕಾಸರಗೋಡು-ಮಂಗಳೂರು ನಡುವಿನ ಬಸ್ಗಳಲ್ಲಿ ಕನಿಷ್ಠ ಗಡಿಭಾಗದ ವರೆಗಾದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಜತೆಗೆ ಬದಿಯಡ್ಕ, ಪೆರ್ಲ ಭಾಗದ ಜನರಿಗೆ ಅನುಕೂಲ ಆಗುವಂತೆ ಕಾಸರಗೋಡು-ಪುತ್ತೂರು ನಡುವೆ ಸಂಚರಿಸುವ ಮತ್ತು ಕಾಸರಗೋಡು-ಸುಳ್ಯ ನಡುವೆ ಸಂಚರಿಸುವ ಭಾಗದಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಮ್ಮ ಬಹತೇಕ ಕೆಲಸ ಕಾರ್ಯಗಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಶ್ರಯಿಸುತ್ತಿರುವ ಈ ಭಾಗದ ಜನರಿಗೆ ಅಂತಾರಾಜ್ಯ ಬಸ್ಗಳಲ್ಲದೆ ಬೇರೆ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಅಂತಾರಾಜ್ಯ ಸಂಚಾರದ ಬಸ್ಗಳಲ್ಲಿ ಯೋಜನೆಯನ್ನು ಒಳಪಡಿಸದಿದ್ದಲ್ಲಿ, ಸರ್ಕಾರದ ಜಾರಿಗೊಳಿಸಲಿರುವ ಉಚಿತ ಪ್ರಯಾಣ ಯೋಜನೆ ಕಾಸರಗೋಡು ಜಿಲ್ಲೆಯ ಜನತೆಗೆ ಪ್ರಯೋಜನಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಯೋಜನೆಯಿಂದ ಜನರನ್ನು ಪರೋಕ್ಷವಾಗಿ ಹೊರಗಿಡುವ ಸಾಧ್ಯತೆಯಿರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಗಡಿಭಾಗದ ವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಪುತ್ತೂರಿನಿಂದ ಮಂಜೇಶ್ವರ, ಉಪ್ಪಳ ಭಾಗಕ್ಕೆ ಬರುವ ಕರ್ನಾಟಕದ ಸರ್ಕಾರಿ ಬಸ್ಗಳಲ್ಲಿ ಕರ್ನಾಟಕದ ಗಡಿವರೆಗೆ ಉಚಿತ ಪ್ರಯಾಣದ ಅವಕಾಶ ನೀಡುತ್ತಿದ್ದು, ಅದೇ ರೀತಿ ಕೇರಳದ ಬಸ್ಗಳಲ್ಲೂ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

