ಭುವನೇಶ್ವರ: 'ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಸುಲಭವಾಗಿ ಸಿಗುತ್ತಿಲ್ಲ ಎನ್ನಲು ನನಗೆ ಹಿಂಜರಿಕೆ ಇಲ್ಲ. ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ಇಲ್ಲಿ ನಡೆದ ಕೃಷಿ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, 'ಜಾಗತಿಕ ನಿರ್ಬಂಧಗಳ ಹೊರತಾಗಿಯೂ ರೈತರಿಗೆ ರಸಗೊಬ್ಬರ ಪೂರೈಕೆಯಾಗುವಂತೆ ಮಾಡಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ' ಎಂದರು.
'ಸಬ್ಸಿಡಿ ರಸಗೊಬ್ಬರಗಳು ಆನ್ಯ ಉದ್ದೇಶಕ್ಕೆ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಅದರ ಜೊತೆಗೆ ಬೆಳೆ ಮತ್ತು ರೈತರ ಮೇಲೆ ಪರಿಣಾಮ ಬೀರುವ ನಕಲಿ ಮತ್ತು ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನಿಯಂತ್ರಿಸಬೇಕು. ಇಂಥ ಚಟುವಟಿಕೆಗಳ ವಿರುದ್ಧ ರಾಜ್ಯಗಳು ಕಠಿಣ ಕ್ರಮಕೈಗೊಳ್ಳಬೇಕು' ಎಂದು ಹೇಳಿದ್ದಾರೆ.
'ಗುಣಮಟ್ಟದ ಕೀಟನಾಶಕ ಮತ್ತು ಬೀಜಗಳ ಲಭ್ಯವಾಗುವಂತೆ ಮಾಡುವ ಕಾನೂನು ಚೌಕಟ್ಟನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಎರಡು ಮಸೂದೆಗಳನ್ನು ತರಲು ಚಿಂತನೆ ನಡೆಸಿದೆ' ಎಂದರು.

