ಕಾಸರಗೋಡು: ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಭರ್ಜರಿ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಮತ ಎಣಿಕೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಎ.ಕೆ.ಎಂ.ಅಶ್ರಫ್ ಹಂತಹಂತವಾಗಿ ಮುನ್ನಡೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಅಂತಿಮವಾಗಿ 31,193 ಮತಗಳ ಅಂತರದಿಂದ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ.
ಎ.ಕೆ.ಎಂ.ಅಶ್ರಫ್ 96,367 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಎನ್ ಡಿಎ ಅಭ್ಯರ್ಥಿ ಕೆ.ಸುರೇಂದ್ರನ್ (ಬಿಜೆಪಿ) 65174 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಎಲ್ ಡಿಎಫ್ ಅಭ್ಯರ್ಥಿ ಕೆ.ಆರ್.ಜಯಾನಂದ 20365 ಮತಗಳನ್ನಷ್ಟೇ ಗಳಿಸಿದ್ದಾರೆ
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ವಿರುದ್ಧ 745 ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಎ.ಕೆ.ಎಂ.ಅಶ್ರಫ್, ಈ ಬಾರಿ ಗೆಲುವಿನ ಅಂತರವನ್ನು ಭರ್ಜರಿಯಾಗಿ ಹೆಚ್ಚಿಸಿಕೊಂಡಿದ್ದಾರೆ. ಎಲ್ ಡಿಎಫ್ ಮತ್ತೊಮ್ಮೆ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಅವರೆಲ್ಲಿಹೋದರು?:
ಈ ಮಧ್ಯೆ ಎಡರಂಗದಿಂದ ಸ್ಪರ್ಧಿಸಿದ್ದ ಕೆ.ಆರ್.ಜಯಾನಂದ ಅವರು 20365 ಮತಗಳನ್ನಷ್ಟೇ ಪಡೆದಿದ್ದು ಅಚ್ಚರಿ ಮೂಡಿಸಿದೆ. ಪಕ್ಷದ ಅಂದಾಜಿನಂತೆ ಐವತ್ತು ಸಾವಿರ ಮತದಾರರಿದ್ದು ಅವರಲ್ಲಿ ಇಪ್ಪತ್ತು ಸಾವಿರ ಮಂದಿ ಪಕ್ಷಕ್ಕೆ ಮತ ಹಾಕಿದ್ದು ಉಳಿದವರು ಏನಾದರೆಂಬುದು ಅಚ್ಚರಿ ಮೂಡಿಸಿದೆ.

