ಕಾಸರಗೋಡು: ಮಂಜೇಶ್ವರದಲ್ಲಿ ಬಿಜೆಪಿ ಪರಾಜಯಕ್ಕೆ ಮತೀಯ ಮೂಲಭೂತವಾದಿ ಸಂಘಟನೆಗಳ ಸಂಘಟಿತ ಪ್ರಯತ್ನ ಮತ್ತು ಎಡರಂಗದ ಮತ ಸೋರಿಕೆ ಕಾರಣವಾಯಿತು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಂಜೇಶ್ವರದ ಎನ್.ಡಿ.ಎ. ಅಭ್ಯರ್ಥಿ ಕೆ. ಸುರೇಂದ್ರನ್ ಅಭಿಪ್ರಾಯಪಟ್ಟರು.
ಚುನಾವಣಾ ಪರಾಜಯದ ಬಳಿಕ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಈ ಆರೋಪ ಮಾಡಿದರು.
ಕಾಸರಗೋಡು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮತೀಯ, ಸಾಮುದಾಯಿಕ ಧ್ರುವೀಕರಣ ನಡೆದಿದೆ ಎಂದು ಆರೋಪಿಸಿದರು.
ಮಂಜೇಶ್ವರದಲ್ಲಿ ಈ ಬಾರಿ ಎಡರಂಗಕ್ಕೆ 20ಸಾವಿರಕ್ಕೂ ಅಧಿಕ ಮತ ಕುಸಿತವಾಗಿದೆ. ಇದು ಸಿಪಿಎಂ ತನ್ನ ಮತಗಳನ್ನು ಯುಡಿಎಫ್ ಗೆ ನೀಡಿರುವುದಕ್ಕೆ ಸ್ಪಷ್ಟ ಸಾಕ್ಷ್ಯ ಎಂದವರು ಆರೋಪಿಸಿದರು.
ಚುನಾವಣೆ ಘೋಷಣೆಯಾದ ಕೂಡಲೇ ಮುಸ್ಲಿಂಲೀಗ್ ಮತ್ತು ಮತೀಯ ಮೂಲಭೂತವಾದಿ ಸಂಘಟನೆಗಳು ಕೖ ಜೋಡಿಸಿ ಮತೀಯ ಏಕೀಕರಣಕ್ಕೆ ಪ್ರಯತ್ನಿಸಿದೆ. ಬಿಜೆಪಿಯನ್ನು ಸೋಲಿಸುವುದೇ ಇದರ ಹಿಂದಿನ ಉದ್ದೇಶ. ಇದಕ್ಕೆ ಎಲ್ ಡಿ ಎಫ್ ಕೂಡಾ ಬೆಂಬಲಿಸಿರುವುದಾಗಿ ಅವರು ದೂರಿದರು. ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಮತಗಳಲ್ಲಿ ಈ ಹಿಂದಿನದ್ದಕ್ಕಿಂತಲೂ ಹೆಚ್ಚಳವಾಗಿದೆ. ಕೇರಳದಲ್ಲಿ ಯುಡಿಎಫ್ ತರಂಗದ ನಡುವೆಯೂ ಬಿಜೆಪಿಯಿಂದ ಮೂವರು ಶಾಸಕರು ಆಯ್ಕೆಯಾಗಿದ್ದಾರೆ.ಇದು ತೃತೀಯ ರಾಜಕೀಯ ಶಕ್ತಿಯ ಉಗಮವನ್ನು ಕೇರಳ ಬಯಸುತ್ತಿದೆ ಎಂಬುದರ ಸೂಚಕ. ಯುಡಿಎಫ್ ತರಂಗವಿದ್ದರೂ ಕೇರಳದ ಅನೇಕ ಕಡೆ ಬಿಜೆಪಿ ಮತಗಳ ವರ್ಧನೆಯಾಗಿದೆ. ಇದು ಭವಿಷ್ಯದ ರಾಜಕೀಯದ ದಿಕ್ಸೂಚಿ ಫಲಿತಾಂಶ ಎಂದು ಸುರೇಂದ್ರನ್ ನುಡಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್ ಉಪಸ್ಥಿತರಿದ್ದರು.

