ಕುಂಬಳೆ: ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಬಸ್ಗಳು ಪ್ರವೇಶಿಸಲು ಹಾಗೂ ಪ್ರಯಾಣಿಕರನ್ನು ಇಳಿಸಿ ಹತ್ತಿಸಲು ಕೂಡಲೇ ವ್ಯವಸ್ಥೆ ಏರ್ಪಡಿಸಬೇಕೆಂದೂ ಇಲ್ಲದಿದ್ದಲ್ಲಿ ಚಳವಳಿ ನಡೆಸಲಾಗುವುದೆಂದು ಬಿಜೆಪಿ ಪಂಚಾಯತಿ ಸಮಿತಿ ಮುನ್ನೆಚ್ಚರಿಕೆ ನೀಡಿದೆ.
40 ವರ್ಷಗಳ ಹಿಂದೆ ಸ್ಥಾಪಿಸಿದ ಬಸ್ ನಿಲ್ದಾಣವನ್ನು ಖಾಸಗಿ ಶಾಪಿಂಗ್ ಕಾಂಪ್ಲೆಕ್ಸ್ನವರಿಗೆ ಬಾಡಿಗೆ ನೀಡುವುದಕ್ಕಾಗಿ ಬದಲಾಯಿಸುವುದು ಸರಿಯಲ್ಲವೆಂದು ಸಭೆ ತಿಳಿಸಿದೆ. ಹಳೆ ಬಸ್ ನಿಲ್ದಾಣದ ಸಮೀಪದಲ್ಲೇ ಕುಂಬಳೆ ಪಂಚಾಯತಿಯ ಸರ್ಕಾರಿ ಕಚೇರಿಗಳು ನೆಲೆಗೊಂಡಿವೆ. ಆದರೆ ಈಗ ಬಸ್ ನಿಲ್ದಾಣವನ್ನು ಬದಲಾಯಿಸುವುದರಿಂದ ಪಂಚಾಯತಿ ಕಚೇರಿ, ಕೆಎಸ್ಇಬಿ, ಪೋಲೀಸ್ ಠಾಣೆ, ಕೃಷಿ ಭವನ, ಮೃಗಾಸ್ಪತ್ರೆ, ಬ್ಯಾಂಕ್ಗಳು, ಮಾರ್ಕೆಟ್ ಮೊದಲಾದೆಡೆಗಳಿಗೆ ತೆರಳಬೇಕಾದವರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ಗಳು ಈ ಮೊದಲಿನಂತೆಯೇ ಹಳೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಲಿರುವ ಸೌಕರ್ಯ ಏರ್ಪಡಿಸಲೇಬೇಕೆಂದು ಸಭೆ ಒತ್ತಾಯಿಸಿದೆ.
ಬಿಜೆಪಿ ಮಂಡಲ ಉಪಾಧ್ಯಕ್ಷ ವಿಕ್ರಂ ಪೈ ಸಭೆಯನ್ನು ಉದ್ಘಾಟಿಸಿದರು. ಪಂಚಾಯತಿ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಶಿವಪ್ರಸಾದ್ ರೈ, ವಿನೋದನ್ ಕಡಪ್ಪುರ, ಗೋಪಾಲನ್ ಕಂಚಿಕಟ್ಟೆ, ಶಶಿ ಕುಂಬಳೆ, ಪಂ. ಸದಸ್ಯರಾದ ರಮೇಶ್ ಭಟ್, ಕಾಂಜಾರ, ಶಾರದ, ಅಮಿತ್ ಆಳ್ವ, ಅಜಿತ್ ಕುಮಾರ್, ವಿವೇಕಾನಂದ ಶೆಟ್ಟಿ, ವರುಣ್ ಕುಮಾರ್ ಮಾತನಾಡಿದರು.

