ಕುಂಬಳೆ: ಅನಂತಪುರ ಉದ್ದಿಮೆ ವಲಯದ ಕೋಳಿ ತ್ಯಾಜ್ಯ ಫ್ಯಾಕ್ಟರಿಯಿಂದ ಉಂಟಾಗುವ ವಾಯು ಮಲಿನೀಕರಣ ಹಾಗೂ ದುರ್ನಾತ ತೀವ್ರಗೊಂಡ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಮುಚ್ಚುಗಡೆಗೊಳಿಸಲು ಪುತ್ತಿಗೆ ಗ್ರಾಮ ಪಂಚಾಯತಿ ನಿರ್ದೇಶಿಸಿದೆ. ಫ್ಯಾಕ್ಟರಿಯಿಂದ ಉಂಟಾಗುವ ಅಸಹನೀಯ ದುರ್ನಾತದಿಂದ ನೌಕರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ತೊಂದರೆ, ವಾಂತಿ ಸಹಿತ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಫ್ಯಾಕ್ಟರಿಯ ಚಟುವಟಿಕೆಗಳನ್ನು ನಿಲುಗಡೆಗೊಳಿಸುವಂತೆ ಅದರ ಮಾಲಕರಿಗೆ ಪಂಚಾಯತಿ ಅಧಿಕಾರಿಗಳು ತಿಳಿಸಿದ್ದಾರೆ.
ಫ್ಯಾಕ್ಟರಿಯಿಂದ ಉಂಟಾಗುವ ಸಮಸ್ಯೆಗಳ ಹಿನ್ನೆಲೆಯಲ್ಲಿ ನಾಗರಿಕರು ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದ್ದರು. ಈ ವಿಷಯ ಪಂಚಾಯತಿ ಆಡಳಿತ ಸಮಿತಿಯ ಗಮನಕ್ಕೆ ಬರುವುದರೊಂದಿಗೆ ಪಂಚಾಯತಿ ಅಧಿಕಾರಿಗಳು ಅನಂತಪುರಕ್ಕೆ ತಲುಪಿ ಪರಿಶೀಲಿಸಿದ ಬಳಿಕ ಮಲಿನೀಕರಣ ಸಮಸ್ಯೆಗೆ ಪರಿಹಾರ ಕಂಡುಕೊಂಡು ಫ್ಯಾಕ್ಟರಿ ಕಾರ್ಯಾಚರಿಸಿದರೆ ಸಾಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಸ್ಯೆ ಸೃಷ್ಟಿಸಿದ್ದ ಫ್ಯಾಕ್ಟರಿ ಒಳಗೊಂಡ ಪ್ರದೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷೆ, ಕಾರ್ಯಕರ್ತರು ಹಾಗೂ ಮೊಗ್ರಾಲ್ ದೇಶೀಯ ವೇದಿ ಪದಾಧಿಕಾರಿಗಳು ಇತ್ತೀಚೆಗೆ ಸಂದರ್ಶಿಸಿದ್ದರು. ನಾಗರಿಕರು ವಾಟ್ಸಪ್ ಗ್ರೂಪ್ ರೂಪಿಸಿ ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಂತೆ ಪುತ್ತಿಗೆ ಪಂಚಾಯತಿ ಫ್ಯಾಕ್ಟರಿ ವಿರುದ್ಧ ಕ್ರಮ ಕೈಗೊಂಡಿದೆ.
ಕೇರಳ ಪಂಚಾಯತ್ ರಾಜ್ ಆಕ್ಟ್ 233(ಎ)3 ಕಾಯ್ದೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ನೋಟೀಸು ನೀಡಲಾಗಿದೆ. ಫ್ಯಾಕ್ಟರಿ ಕಾರ್ಯಾಚರಿ ಸಬೇಕಾದರೆ ವಾಯು ಮಲಿನೀಕಣ ತಡೆಯಲು ವೈಜ್ಞಾನಿಕ ರೀತಿಯ ಕ್ರಮ ಕೈಗೊಳ್ಳಬೇಕೆಂದು ನೋಟೀಸಿನಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.

.jpg)
