ಮಂಜೇಶ್ವರ: ಕಳೆದ ಹಲವಾರು ವರ್ಷಗಳಿಂದ ದೈಗೋಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ, ಹಲವಾರು ಶಿಷ್ಯಂದಿರ ಅಚ್ಚುಮೆಚ್ಚಿನ ಜನಮನ್ನಣೆಯನ್ನು ಪಡೆದ, ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ವಿಜೇತೆ, ಕೆಂದ್ರ ಸರ್ಕಾರದ ಗಣರಾಜ್ಯ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತೆ, ವಿಶಾಲಾಕ್ಷಿ ಪೂಂಜ ಅಡೆಕಳಕಟ್ಟೆ ಇವರ ಬೀಳ್ಕೊಡುಗೆ ಸಮಾರಂಭ ಹಾಗೂ ಅಂಗನವಾಡಿ ಪುಟಾಣಿಗಳ ನೃತ್ಯ ಕಾರ್ಯಕ್ರಮ ಸಾರ್ವಜನಿಕ ಸನ್ಮಾನ ಸಮಿತಿ ದೈಗೋಳಿ ಇದರ ಸಾರಥ್ಯದಲ್ಲಿ ಜ್ಞಾನೋದಯ ಸಮಾಜದ ಗಣೇಶ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ, ಸಾರ್ವಜನಿಕ ಸನ್ಮಾನ ಸಮಿತಿ ಅಧ್ಯಕ್ಷೆ ಶಾಂತ ಕುಮಾರಿ ಬಿ. ಅವರು ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಸದಸ್ಯರೂ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೀಂಜ ಪಂಚಾಯತಿನ ಮಾಜಿ ಉಪಾಧ್ಯಕ್ಷ ತಿಮ್ಮಣ್ಣ ಭಟ್ ಕೊಮ್ಮೆ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಆಶಾಲತ ಬಿ.ಯಂ, ಜ್ಞಾನೋದಯ ಸಮಾಜದ ಸದಸ್ಯ ಬಿ.ವಿ. ಸುರೇಶ್, ಮೀಂಜ ಅಂಗನವಾಡಿ ಮೇಲ್ವಿಚಾರಕಿ ಬಿಂದು, ವರ್ಕಾಡಿ ಪಂಚಾಯತಿನ ಮಾಜಿ ಸದಸ್ಯೆ ಮಮತ ಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶಾಲಾಕ್ಷಿ ಪೂಂಜ ಅವರಿಗೆ ಶಾಲು ಹೊದೆಸಿ, ಫಲಪುಷ್ಪ ಸಹಿತ ಸನ್ಮಾನ ಪತ್ರ ಹಾಗೂ ಗೌರವ ಕಾಣಿಕೆಯ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಿಶಾಲಾಕ್ಷಿ ಪೂಂಜ ತಮ್ಮ ಅನುಭವದ ಮಾತುಗಳನ್ನಾಡಿದರು. ಸನ್ಮಾನ ಪತ್ರವನ್ನು ಸಮಿತಿಯ ಸದಸ್ಯ ಸುಧೀರ್ ರಂಜನ್ ದೈಗೋಳಿ ವಾಚಿಸಿದರು. ಈ ಸಂದರ್ಭದಲ್ಲಿ ಶಿಷ್ಯ ಗಣದಿಂದ ನೆಚ್ಚಿನ ಶಿಕ್ಷಕಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ವೆಂಕಟೇಶ್ವರ ಭಟ್ ಬಜೆ, ಸುಂದರ ಮಾಸ್ತರ್, ಚಿತ್ತರಂಜನ್ ದೈಗೋಳಿ, ಶಿವರಾಮ ಭಟ್, ನಾರಾಯಣ ತುಂಗ, ಜಮಾಲುದ್ದೀನ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ ಪ್ರಸಾದ್ ಮೊದಲಾದವರು ಶುಭ ಹಾರೈಸಿದರು. ಸಾರ್ವಜನಿಕ ಸನ್ಮಾನ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಭಟ್ ಪಜ್ವ ದೈಗೋಳಿ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ದೈಗೋಳಿ ವಂದಿಸಿದರು. ಮೀಯಪದವು ಶಾಲಾ ಅಧ್ಯಾಪಕ ಸುನಿಲ್ ಮಾಸ್ತರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅಂಗನವಾಡಿಯ ಪುಟಾಣಿಗಳಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು.

.jpg)
.jpg)
