ನವದೆಹಲಿ: ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ನೇರ ಮತ್ತು ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನವು ಭಾರತದ ವಿರುದ್ಧ ಉಗ್ರರನ್ನು ಬಳಸುವುದನ್ನು ಮುಂದುವರಿಸಿದರೆ, ತಾನು ವಿಶ್ವದ ಭೂಪಟದಲ್ಲಿ ಇರಬೇಕೋ ಅಥವಾ ಕೇವಲ ಇತಿಹಾಸದ ಪುಟಗಳನ್ನು ಸೇರಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ನವದೆಹಲಿಯ ಮಾನೆಕ್ಷಾ ಸೆಂಟರ್ನಲ್ಲಿ 'ಯೂನಿಫಾರ್ಮ್ ಅನ್ವೈಲ್ಡ್' ಹಮ್ಮಿಕೊಂಡಿದ್ದ ಸೇನಾ ಸಂವಾದ ಸಂವಾದಾತ್ಮಕ ಅಧಿವೇಶನದಲ್ಲಿ ಮಾತನಾಡಿದ ಉಪೇಂದ್ರ ದ್ವಿವೇದಿ, ಇಸ್ಲಾಮಾಬಾದ್ನ ನಿದ್ದೆಗೆಡಿಸುವಂತಹ ಈ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
'ಆಪರೇಷನ್ ಸಿಂಧೂರ್' ನೆನಪಿಸಿದ ಸೇನಾ ಮುಖ್ಯಸ್ಥರು
ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಭೀಕರ ಮಿಲಿಟರಿ ಸಂಘರ್ಷ ಆಪರೇಷನ್ ಸಿಂಧೂರ ನಡೆದು ಇಂದಿಗೆ ಭರ್ತಿ ಒಂದು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ಆಪರೇಷನ್ ಸಿಂಧೂರ್ಗೆ ಕಾರಣವಾದಂತಹ ಪರಿಸ್ಥಿತಿಗಳು ಮತ್ತೊಮ್ಮೆ ಎದುರಾದರೆ ಭಾರತೀಯ ಸೇನೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜನರಲ್ ದ್ವಿವೇದಿ ಅವರು ಈ ಕಠಿಣ ಉತ್ತರವನ್ನು ನೀಡಿದ್ದಾರೆ. ಪಾಕಿಸ್ತಾನವು ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿದರೆ ಭಾರತ ಸುಮ್ಮನೆ ಕೂರಲ್ಲ. ಗಡಿಯ ಆಚೆಗಿನ ಯಾವುದೇ ಸುರಕ್ಷಿತ ತಾಣವೂ ಇನ್ನು ಮುಂದೆ ಸುರಕ್ಷಿತವಾಗಿರಲ್ಲ. ಪಾಕಿಸ್ತಾನ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಯಸುತ್ತದೆಯೇ ಇಲ್ಲವೇ ಎಂಬುದನ್ನು ಅವರ ಆಲೋಚನೆಗಳಿಗೇ ಬಿಡಲಾಗಿದೆ ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.
ಏನಿದು 'ಆಪರೇಷನ್ ಸಿಂಧೂರ್'? 88 ಗಂಟೆಗಳ ಆ ಮಹಾ ಯುದ್ಧದ ಕಥೆ ಇಲ್ಲಿದೆ!
ಕಳೆದ ವರ್ಷ ಮೇ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಭೀಕರ ದಾಳಿ ನಡೆಸಿ 26 ಭಾರತೀಯ ನಾಗರಿಕರನ್ನು ಬಲಿತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ ತರಬೇತಿ ಶಿಬಿರಗಳ ಮೇಲೆ ಭೀಕರ ಹಾಗೂ ನಿಖರವಾದ ವಾಯುದಾಳಿ ನಡೆಸಿದ್ದವು.
ಇದರಿಂದ ಹತಾಶೆಗೊಂಡ ಪಾಕಿಸ್ತಾನ ಸೇನೆಯು ಭಾರತದ ಮಿಲಿಟರಿ ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತಿರುಗೇಟು ನೀಡಲು ಯತ್ನಿಸಿತ್ತು. ಆದರೆ, ಭಾರತೀಯ ಪಡೆಗಳು ಪಾಕಿಸ್ತಾನದ ಒಳನುಗ್ಗಿ ಭೀಕರ ಕೌಂಟರ್-ಅಟ್ಯಾಕ್ ನಡೆಸಿದವು. ಅಣ್ವಸ್ತ್ರ ಸಜ್ಜಿತ ಉಭಯ ದೇಶಗಳ ನಡುವಿನ ಈ ಮಿಲಿಟರಿ ಸಂಘರ್ಷವು ಬರೋಬ್ಬರಿ 88 ಗಂಟೆಗಳ ಕಾಲ ನಡೆದಿತ್ತು. ಅಂತಿಮವಾಗಿ ಪಾಕಿಸ್ತಾನದ ಡಿಜಿಎಂಒ ಭಾರತದ ಕೌಂಟರ್ಪಾರ್ಟ್ಗೆ ಕರೆ ಮಾಡಿ ಕದನ ವಿರಾಮಕ್ಕೆ ವಿನಂತಿಸಿಕೊಂಡ ನಂತರ, ಮೇ 10 ರ ಸಂಜೆ ಈ ಸಂಘರ್ಷ ತಾತ್ಕಾಲಿಕವಾಗಿ ಮುಕ್ತಾಯಗೊಂಡಿತ್ತು.
"ಸಮಯ, ಸಂದರ್ಭ ಮತ್ತು ದಾಳಿಯ ಶೈಲಿ ನಮ್ಮದೇ ಇರಲಿದೆ"
ಆಪರೇಷನ್ ಸಿಂಧೂರ್ ಮುಗಿದಿದ್ದರೂ ಭಾರತೀಯ ಸೇನೆ ಅಲರ್ಟ್ ಮೋಡ್ನಲ್ಲೇ ಇದೆ. ಈ ಕುರಿತು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಲೈನ್ ಆಫ್ ಕಂಟ್ರೋಲ್ ಆಚೆಗಿನ ಯಾವುದೇ ಉಗ್ರರ ನೆಲೆಗಳು ಸುರಕ್ಷಿತವಾಗಿಲ್ಲ. ನಾವು ಪ್ರತಿಯೊಂದರ ಮೇಲೂ ದಾಳಿ ಮಾಡುತ್ತೇವೆ. ಪ್ರಧಾನಮಂತ್ರಿಯವರು ಹೇಳಿದ 'ಹೊಸ ನಾರ್ಮಲ್' ನಿಯಮದಂತೆ ನಾವು ಎಲ್ಲವನ್ನೂ ಧ್ವಂಸಗೊಳಿಸುತ್ತೇವೆ. ಆದರೆ ಆ ದಾಳಿಯ ಪರಿಸ್ಥಿತಿಗಳು, ಸಮಯ ಮತ್ತು ವಿಧಾನ ನಮ್ಮದೇ ಆಗಿರುತ್ತದೆ ಎಂದು ಪಾಕಿಸ್ತಾನಕ್ಕೆ ಮತ್ತೊಮ್ಮೆ ನಡುಕ ಹುಟ್ಟಿಸಿದ್ದಾರೆ.

