ಮಂಜೇಶ್ವರ: ಎಂಭತ್ತೆರಡು ವರ್ಷದ ಇಳಿ ವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಂತಿರುವ, ಹಿರಿಯ-ಕಿರಿಯ ಬರಹಗಾರರಿಗೆ ಸ್ಫೂರ್ತಿಯ ಸೆಲೆಯಾಗಿರುವ ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್ ಭಟ್ ಕೊಳಚಪ್ಪು ಇವರ ಹದಿಮೂರನೆಯ ಕೃತಿ "ನೀಲಾಂಜನ" ಭಕ್ತಿಗೀತೆಗಳ ಸಂಕಲನ ಇತ್ತೀಚೆಗೆ ಅವರ ನಿವಾಸ ಕೊಳಚಪ್ಪು ನಿವಾಸ 'ಸತ್ಯಶ್ರೀ'ಯಲ್ಲಿ ಬಿಡುಗಡೆಗೊಳಿಸಲಾಯಿತು.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ.ಮಹಾಬಲ ತಿಲಕ ಮಂಗಳೂರು ಇವರು ಕೃತಿ ಬಿಡುಗಡೆ ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ತಾಯಿ ಸಾಧಿಸಿದ ಅಪ್ರತಿಮ ಸಾಧನೆಯ ಕುರಿತು ಅಪಾರ ಸಂತಸ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಮತ್ತು ಸಾಹಿತ್ಯ ಪ್ರವರ್ತಕ ಡಾ. ಕೊಳ್ಚಪ್ಪೆ ಗೋವಿಂದ ಭಟ್ ದೀಪ ಪ್ರಜ್ವಲನೆ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬರವಣಿಗೆ ಕ್ಷೇತ್ರದಲ್ಲಿ ಸತ್ಯವತಿ ಭಟ್ ಕೊಳಚಪ್ಪು ಅವರು ಓರ್ವ ವಿಶೇಷ ಪ್ರತಿಭೆ. ಅನೇಕ ಹಿರಿಯ ಕಿರಿಯ ಬರಹಗಾರರ ಸ್ಫೂರ್ತಿಗೆ ಪ್ರೇರಕರಾದವರೆಂದು ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲ ಮತ್ತು ಹಿರಿಯ ಸಾಹಿತಿ ಪ್ರೊ.ಪಿ.ಎನ್.ಮೂಡಿತ್ತಾಯರು ಕೃತಿ ಪರಿಚಯ ಮಾಡಿದರು. ಕೃತಿಕಾರರಾದ ಬಿ. ಸತ್ಯವತಿ ಎಸ್ ಭಟ್ ಕೊಳಚಪ್ಪು ಮಾತನಾಡಿ ತಾಯಿ ಸರಸ್ವತಿಯ ಅನುಗ್ರಹದಿಂದ, ಮಕ್ಕಳು, ಅಳಿಯ ಸೊಸೆಯಂದಿರ ಸಹಕಾರದಿಂದ, ಬಂಧುಗಳ ಪೆÇ್ರೀತ್ಸಾಹದಿಂದ ಸಾಹಿತ್ಯ ಕ್ಷೇತ್ರದಲ್ಲಿ ಒಂದಷ್ಟು ಸಾಧನೆ ಮಾಡಲು ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸುತ್ತ, ಸಾಹಿತ್ಯದ ಬೆಳವಣಿಗೆಗೆ ಸಹಕರಿಸಿದ ಸರ್ವರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು.
ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಸಾಹಿತಿ ಡಾ.ರಮಾನಂದ ಬನಾರಿ ಅವರು ಕಾರ್ಯಕ್ರಮದ ಕುರಿತು ವ್ಯಕ್ತಪಡಿಸಿದ ಶುಭದೊಸಗೆಯ ಧ್ವನಿ ಮುದ್ರಣವನ್ನು ಸಭೆಯಲ್ಲಿ ಬಿತ್ತರಿಸಲಾಯಿತು.
ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಕೃತಿಕಾರರಾದ ಬಿ.ಸತ್ಯವತಿ ಭಟ್ ಕೊಳಚಪ್ಪು ಇವರ ಸಾಹಿತ್ಯ ಕೈಂಕರ್ಯಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಆಪ್ತ ಬಂಧುಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. "ನೀಲಾಂಜನ" ಕೃತಿಯಿಂದ ಆಯ್ದ ಭಕ್ತಿಗೀತೆಗಳಿಗೆ ಸುಶ್ರಾವ್ಯವಾಗಿ ಹಾಡಿದ ಪ್ರಸನ್ನ ಕಾಕುಂಜೆ ಅವರ ಹಾಡುಗಾರಿಕೆಯ ಧ್ವನಿಮುದ್ರಣವನ್ನು ಸಭೆಯಲ್ಲಿ ಆಸ್ವಾದಿಸಲಾಯಿತು.
ಲತೀಶ್ ಎಂ.ಸಂಕೊಳಿಗೆ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಕೊಳಚಪ್ಪು ಪ್ರಾರ್ಥನೆಗೈದರು. ಪ್ರಮೀಳಾ ಚುಳ್ಳಿಕಾನ ವಂದಿಸಿದರು. ಹಿರಿಯ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಿವೃತ್ತ ಕನ್ನಡ ಅಧ್ಯಾಪಕ, ಕವಿ ಗುಣಾಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಲಕ್ಷ್ಮೀ ವಿ ಭಟ್ ಮಂಜೇಶ್ವರ, ಪ್ರಮೀಳಾ ಚುಳ್ಳಿಕಾನ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಡಾ.ಅಬ್ರಾಜೆ ಕೇಶವ ಭಟ್ ಮತ್ತು ಸತ್ಯವತಿ ಎಸ್ ಭಟ್ ಕೊಳಚಪ್ಪು ಮುಂತಾದರು ಕವನ ವಾಚಿಸಿದರು.

.jpg)
.jpg)
