ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 66 ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಪದ್ಮ ಪ್ರದಾನ ಮಾಡಿದರು. ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆಯಿತು.
ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಮತ್ತು ಶಾಸ್ತ್ರೀಯ ಸಂಗೀತಗಾರ, ಪಿಟೀಲು ವಾದಕ ಎನ್. ರಾಜಮ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧರ್ಮೇಂದ್ರ ಅವರ ಪರವಾಗಿ ಅವರ ಪತ್ನಿ, ಸಂಸದೆ ಹೇಮಾ ಮಾಲಿನಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ಶಾಸ್ತ್ರೀಯ ಸಂಗೀತಗಾರ ಶತಾವಧಾನಿ ಆರ್. ಗಣೇಶ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್, ಗ್ಯಾಸ್ಟ್ರೋಎಂಟರಾಲಜಿಸ್ಟ್ ಕಳ್ಳಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ ಅವರಿಗೆ ಪದ್ಮಭೂಷಣ ಪ್ರದಾನ ಮಾಡಿದರು.
ಜಾಹೀರಾತು ಲೋಕಕ್ಕೆ ವಿಶೇಷ ಮೆರಗು ತುಂಬಿದ್ದ ಪದ್ಮಶ್ರೀ ಪಿಯೂಷ್ ಪಾಂಡೆ ಮತ್ತು ಮಾಹಿ ಸಂಸದ ವಿಜಯ್ ಕುಮಾರ್ ಮಲ್ಹೋತ್ರಾ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಯಿತು. ಪಾಂಡೆ ಅವರ ಪತ್ನಿ ಮತ್ತು ಮಲ್ಹೋತ್ರಾ ಅವರ ಮಗ ಪ್ರಶಸ್ತಿ ಸ್ವೀಕರಿಸಿದರು.
ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಹರ್ಮನ್ಪ್ರೀತ್ ಕೌರ್, ನಟ ಪ್ರೊಸೆನ್ಜಿತ್ ಚಟರ್ಜಿ, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕರಾಗಿದ್ದ ಕೆ.ವಿಜಯ್ ಕುಮಾರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
2026ನೇ ಸಾಲಿನಲ್ಲಿ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಎರಡು ಪ್ರತ್ಯೇಕ ಸಮಾರಂಭಗಳಲ್ಲಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮ ಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಘೋಷಣೆಯಾಗಿದೆ.
ಕಲೆ, ಸಾಮಾಜಿಕ ಕಾರ್ಯ, ವಿಜ್ಞಾನ, ವಾಣಿಜ್ಯ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರತಿವರ್ಷ ಗಣರಾಜ್ಯೋತ್ಸವದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

