ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆರ್ಕಳ ಪಾಣಾಲದಲ್ಲಿ ಪತಿ ಮನೆಯವರ ಎದರೇ ಗೃಹಿಣಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ. ಚರ್ಲಡ್ಕ ನಿವಾಸಿ ಹಾಗೂ ಚೆರ್ಕಳ ಪಾಣಾಲಂ ನಿವಾಸಿ ಆದಿಲ್ ಎಂಬಾತನ ಪತ್ನಿ ಫಾತಿಮತ್ ಸುಪೈದಾ(24)ಮೃತಪಟ್ಟ ಗೃಹಿಣಿ. ಪತಿ ಮನೆಯವರ ನಿರಂತರ ಕಿರುಕುಳದಿಂದ ಫಾತಿಮತ್ ಸುಪೈದಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ಈಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಆದಿಲ್-ಫಾತಿಮತ್ ಸುಪೈದಾ ಅವರ ಒಂದನೇ ವಿವಾಹ ವಾರ್ಷಿಕ ಮೇ 25ರಂದು ನಡೆಯಲಿರುವ ಮಧ್ಯೆ ಈ ದುರಂತ ಸಾವು ಸಂಭವಿಸಿದೆ.
ವರದಕ್ಷಿಣೆಯಾಗಿ ಲಭಿಸಿದ್ದ ಚಿನ್ನಾಭರಣ ತನಗೆ ನೀಡುವಂತೆ ಕಳೆದ ಹಲವು ಸಮಯದಿಂದ ಪತಿ ಆದಿಲ್ ಕಿರುಕುಳ ನೀಡುತ್ತಿದ್ದು, ಶನಿವಾರ ಚಿನ್ನ ನೀಡುವಂತೆ ಮನೆಯಲ್ಲಿ ಕಲಹ ನಡೆದಿತ್ತು. ಚಿನ್ನಾಭರಣ ನೀಡಲು ನಿರಾಕರಿಸಿದ ಫಾತಿಮತ್ ಸುಪೈದಾಳನ್ನು ಪತಿ ಥಳಿಸಿದ್ದನೆನ್ನಲಾಗಿದೆ. ಥಳಿಸಿದ ಮಾಹಿತಿ ಯಾರಿಗೂ ತಿಳಿಸದಂತೆ, ಆಕೆಯ ಮೊಬೈಲನ್ನು ಒಡೆದುಹಾಕಲಾಗಿತ್ತು. ಪತಿ ಮನೆಯವರ ದೈಹಿಕ, ಮಾನಸಿಕ ಕಿರುಕುಳದ ಬಗ್ಗೆ ತನ್ನ ತವರುಮನೆಗೆ ಫಾತಿಮತ್ ಸುಪೈದಾ ಈ ಹಿಂದೆಯೇ ಮಾಹಿತಿ ನೀಡಿದ್ದರು. ಪತಿ ಮನೆಯಲ್ಲಿ ಕಲಹ ನಡೆಯುತ್ತಿದ್ದಂತೆ, ಫಾತಿಮತ್ ಸುಪೈದಾ ಕೊಠಡಿಗೆ ತೆರಳಿ ಅತ್ತೆ-ಮಾವನ ಎದುರೇ ಆ್ಯಸಿಡ್ ಸೇವಿಸಿದ್ದು, ಅಲ್ಲೇ ಕುಸಿದು ಬಿದ್ದಿದ್ದರು. ಆದರೆ, ಮನೆಯವರು ಯಾರೂ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಗಿರಲಿಲ್ಲ ಎಂದು ಸಂಬಂಧಿಕರು ದೂರಿದ್ದಾರೆ. ಫಾತಿಮತ್ ಸುಪೈದಾ ಅವರನ್ನು ಮನೆಯವರು ಆಗಮಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಸಹಜ ಸಾವಿನ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಪತಿ ಆದಿಲ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಂಪತಿಗೆ ಎರಡು ತಿಂಗಳು ಪ್ರಾಯದ ಮಗುವಿದೆ.


