ಚೆನ್ನೈ: ತಮಿಳುನಾಡಿನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಐಯುಎಂಎಲ್ ಪಕ್ಷದ ಎಂ.ಶಾಜಹಾನ್ ಮತ್ತು ವಿಸಿಕೆ ಪಕ್ಷದ ವನ್ನಿ ಅರಸು ಶುಕ್ರವಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರು ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿ ವಿಜಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈಗಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ವಿಜಯ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದೀಗ ಐಯುಎಂಎಲ್ ಮತ್ತು ವಿಸಿಕೆ ಸೇರ್ಪಡೆಯೊಂದಿಗೆ ಆಡಳಿತಾರೂಢ ಮೈತ್ರಿಕೂಟದ ಪಾಲುದಾರರ ಪಕ್ಷಗಳ ಸಚಿವರ ಸಂಖ್ಯೆ ನಾಲ್ಕಕ್ಕೇರಿದೆ.
ಡಿಎಂಕೆ ನಾಯಕ ಎ.ರಾಜಾ ವ್ಯಂಗ್ಯ: ಡಿಎಂಕೆ ನಾಯಕ ಎ.ರಾಜಾ ಅವರು ಐಯುಎಂಎಲ್ ಮತ್ತು ವಿಸಿಕೆ ಪಕ್ಷಗಳ ನಡೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಮನೆಯ ತೆಂಗಿನ ಮರ ನೆರೆ ಮನೆಯ ಕಡೆಗೆ ಬಾಗಿ, ಅಲ್ಲಿ ಕಾಯಿ ಬಿಟ್ಟರೆ, ಆ ಮರದಿಂದ ಲಾಭ ಪಡೆಯಲು ಯತ್ನಿಸುವವರಿಗೆ ಏನೆಂದು ಕರೆಯಬೇಕು? ಎಂದು ಮಿತ್ರಪಕ್ಷಗಳನ್ನು ಟೀಕಿಸಿದ್ದಾರೆ.

