ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು (ಪಿಐಎಲ್) ಸಾಮಾನ್ಯ ಸೇವಾ ಕೇಂದ್ರಗಳಲ್ಲಿ 'ಆಧಾರ್ ಕೇವಲ ಗುರುತಿನ ಪುರಾವೆಯಾಗಿದೆ ಮತ್ತು ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪುರಾವೆಯಲ್ಲ ' ಎನ್ನುವುದನ್ನು ಸ್ಪಷ್ಟಪಡಿಸುವ ಪ್ರದರ್ಶನ ಫಲಕಗಳನ್ನು ಅಳವಡಿಸಲು ನಿರ್ದೇಶನಗಳನ್ನೂ ಕೋರಿದೆ.
ಅರ್ಜಿಯಲ್ಲಿ ಯುಐಡಿಎಐ, ಕೇಂದ್ರ ಗೃಹ, ಕಾನೂನು ಮತ್ತು ನ್ಯಾಯ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.
ಆಧಾರ್ ಮೂಲತಃ ಗುರುತಿನ ಚೀಟಿಯಾಗಿದ್ದರೂ ಕ್ರಮೇಣ ಅದನ್ನು ಪಡಿತರ ಚೀಟಿ, ವಸತಿ ಪ್ರಮಾಣಪತ್ರ ಮತ್ತು ಮತದಾರರ ಗುರುತಿನ ಚೀಟಿಯಂತಹ ಇತರ ದಾಖಲೆಗಳನ್ನು ಪಡೆಯಲು 'ಮೂಲದಾಖಲೆ'ಯನ್ನಾಗಿ ಬಳಸಲಾಗುತ್ತಿದೆ ಎಂದು ಅರ್ಜಿಯು ವಾದಿಸಿದೆ.
ಜನಸಂಖ್ಯೆಯ ಸುಮಾರು ಶೇ.99ರಷ್ಟು ಅಂದರೆ 144 ಕೋಟಿಗೂ ಅಧಿಕ ಜನರಿಗೆ ಆಧಾರ್ ಸಂಖ್ಯೆಗಳನ್ನು ನೀಡಿರುವುದನ್ನು ಅರ್ಜಿಯು ಉಲ್ಲೇಖಿಸಿದೆ. ದುರ್ಬಲ ಪರಿಶೀಲನಾ ವ್ಯವಸ್ಥೆಯಿಂದಾಗಿ ನುಸುಳುಕೋರರು 'ಭಾರತೀಯ ನಾಗರಿಕರು' ವರ್ಗದಡಿ ಸುಳ್ಳು ಮಾಹಿತಿಗಳನ್ನು ನೀಡಿ ಆಧಾರ್ ಪಡೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳು ನಂತರ ಇತರ ದಾಖಲೆಗಳನ್ನು ಪಡೆದುಕೊಂಡು ಸಾಮಾನ್ಯ ನಾಗರಿಕರೊಂದಿಗೆ ಬೆರೆತು ಹೋಗುತ್ತಾರೆ. ಈ ದುರ್ಬಳಕೆಯು ಸರಕಾರದ ಕಲ್ಯಾಣ ಕಾರ್ಯಕ್ರಮಗಳು ಗುರಿ ತಲುಪುವಲ್ಲಿ ಅಡ್ಡಿಯಾಗುತ್ತದೆ ಮತ್ತು ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಅರ್ಜಿಯು ಪ್ರತಿಪಾದಿಸಿದೆ.
ನಾಗರಿಕರು ಮತ್ತು ವಿದೇಶಿಯರ ನಡುವಿನ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿರುವ ಕಾರಣ ಆಧಾರ್ ಕಾಯ್ದೆ , 2016 ಈಗಿನ ಸಂದರ್ಭದಲ್ಲಿ ಅಸಮಂಜಸವಾಗಿದೆಯೇ ಎಂದೂ ಅರ್ಜಿಯು ಪ್ರಶ್ನಿಸಿದೆ.

