ನಾಗ್ಪುರ: 'ಭಾರತದ ಪ್ರಜಾಪ್ರಭುತ್ವಕ್ಕೆ ಎಲ್ಲ ಧ್ವನಿಗಳು ಮತ್ತು ಭಾವನೆಗಳನ್ನು ಒಳಗೊಳ್ಳುವ ಸಾಮರ್ಥ್ಯವಿದೆ. 'ಜೆನ್ ಜೀ' ಪೀಳಿಗೆಯವರೂ ದೇಶದ ಮೇಲೆ ನಂಬಿಕೆ ಇಟ್ಟಿದ್ದಾರೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹೇಳಿದೆ.
ಕಾಕ್ರೊಚ್ ಜನತಾ ಪಕ್ಷ(ಸಿಜೆಪಿ) ಕುರಿತು ಪ್ರತಿಕ್ರಿಯಿಸಿರುವ ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ ಸುನೀಲ್ ಅಂಬೇಕರ್, 'ಭಾರತವು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ.
ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸುತ್ತದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳಿಗೂ ಮುಕ್ತ ಅವಕಾಶ ನೀಡಿದೆ' ಎಂದರು. ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗಿನ ಸಂವಾದದ ಸಂದರ್ಭದಲ್ಲಿ ಅವರು ಸಿಜೆಪಿ ವಿದ್ಯಮಾನದ ಕುರಿತು ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
'ನಮ್ಮ ಜನಶಕ್ತಿ, ಪ್ರಜಾಪ್ರಭುತ್ವ ಪ್ರಬಲವಾಗಿವೆ. ನಮ್ಮ ಪ್ರಜಾಪ್ರಭುತ್ವವು ಎಲ್ಲರ ಧ್ವನಿ ಮತ್ತು ಭಾವನೆಗಳನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ. ಜನರು ಕೂಡ ನಂಬಬೇಕು. ಆರ್ಎಸ್ಎಸ್ಗೆ ಇದರಲ್ಲಿ ಸಂಪೂರ್ಣ ನಂಬಿಕೆ ಇದೆ' ಎಂದು ಅಂಬೇಕರ್ ಹೇಳಿದರು.
'ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಯಾವುದೇ ರೀತಿ ಚರ್ಚೆ ಮಾಡಬಹುದು. ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಆದರೆ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆಘಾತದಂತೆ ಪರಿಗಣಿಸಬಾರದು. ಅವುಗಳನ್ನು ಸಾಮಾನ್ಯ ಪ್ರಕ್ರಿಯೆಯ ಭಾಗವೆಂದು ಪರಿಗಣಿಸಬೇಕು' ಎಂದು ಅಭಿಪ್ರಾಯಪಟ್ಟರು.

