ನವದೆಹಲಿ: ದೇಶದ ಹಲವು ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ದೇಶದ ಜನರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಅವರು, ತೀವ್ರ ಬಿಸಿಲಿನಿಂದಾಗಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಇಂತಹ ಹವಾಮಾನ ಪರಿಸ್ಥಿತಿಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಧಾರಾಕಾರ ಮಳೆ: ಸಿಡಿಲು ಬಡಿದು ಒಬ್ಬ ಸಾವುಸಿಎಂ ಬದಲಾವಣೆ | ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ: ಸಚಿವ ಜಿ.ಪರಮೇಶ್ವರ
ವೃದ್ಧರು, ಮಕ್ಕಳ ಬಗ್ಗೆ ಇರಲಿ ನಿಗಾ
ಭಾರತದ ವಿವಿಧ ಭಾಗಗಳಲ್ಲಿ ತಾಪಮಾನ ತೀವ್ರವಾಗಿ ಏರುತ್ತಿದ್ದು, ಇದರ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಈ ಬಿಸಿಲು ನಮ್ಮೆಲ್ಲರಿಗೂ ಕಠಿಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಬಿಸಿಲಿನಿಂದ ಬೇಗನೆ ಬಳಲುವ ಸಾಧ್ಯತೆ ಇರುವುದರಿಂದ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಮೋದಿ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ನೀಡಿದ ಪ್ರಮುಖ ಸಲಹೆಗಳು:
*ಪ್ರತಿಯೊಬ್ಬರೂ ಹೆಚ್ಚು ನೀರು ಕುಡಿಯಬೇಕು. ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲಿಯನ್ನು ಜೊತೆಯಲ್ಲೇ ಕೊಂಡೊಯ್ಯಬೇಕು.
*ಬಿಸಿಲಿನಲ್ಲಿ ಸಂಚರಿಸುವ ಇತರರಿಗೂ ಒಂದು ಲೋಟ ನೀರು ನೀಡಿ ಸಹಾಯ ಮಾಡಿ.
*ತಲೆಸುತ್ತು, ವಾಕರಿಕೆ ಅಥವಾ ವಿಪರೀತ ಆಯಾಸದಂತಹ 'ಹೀಟ್ ಎಕ್ಸಾಸ್ಷನ್' (ಬಿಸಿಲಿನ ಬಳಲಿಕೆ) ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಇದು ತಕ್ಷಣವೇ ಅಪಾಯಕಾರಿಯಾಗಿ ತಿರುಗಿ 'ಹೀಟ್ಸ್ಟ್ರೋಕ್'ಗೆ (ಬಿಸಿಲ ಬೇಗೆಯ ಹೊಡೆತ) ಕಾರಣವಾಗಬಹುದು.
*ನಿಮ್ಮ ಸುತ್ತಮುತ್ತಲಿನ ಯಾರಿಗಾದರೂ ಅಸ್ವಸ್ಥತೆ, ದೌರ್ಬಲ್ಯ ಅಥವಾ ತಲೆನೋವು ಕಾಣಿಸಿಕೊಂಡರೆ, ತಕ್ಷಣವೇ ಅವರನ್ನು ತಂಪಾದ ಮತ್ತು ನೆರಳಿನ ಜಾಗಕ್ಕೆ ಕರೆದೊಯ್ಯಿರಿ. ಅವರಿಗೆ ನೀರು, ಒಆರ್ಎಸ್ ಇತ್ಯಾದಿಗಳನ್ನು ನೀಡಿ, ವಿಶ್ರಾಂತಿ ಪಡೆಯಲು ಸಹಾಯ ಮಾಡಿ.
*ಬಿಸಿಲಿನ ಬೇಗೆಯ ಈ ಸಮಯದಲ್ಲಿ ನಿಮ್ಮ ವೃದ್ಧ ಪೋಷಕರು, ಅಜ್ಜ-ಅಜ್ಜಿ ಮತ್ತು ಪ್ರೀತಿಪಾತ್ರರಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಹೊರಗೆ ಹೋಗದಂತೆ ಮತ್ತು ವಿಶ್ರಾಂತಿ ಪಡೆಯುವಂತೆ ಅವರಿಗೆ ನೆನಪಿಸಿ.
*ಈ ತೀವ್ರ ಬಿಸಿಲಿನಲ್ಲಿ ನಮ್ಮ ಸುತ್ತಲಿನ ಪಕ್ಷಿಗಳು ಮತ್ತು ಪ್ರಾಣಿಗಳನ್ನು ನಾವು ನೆನಪಿಸಿಕೊಳ್ಳಬೇಕು. ನಿಮ್ಮ ಮನೆ, ಬಾಲ್ಕನಿ, ತಾರಸಿ, ಅಂಗಡಿ ಅಥವಾ ಕಚೇರಿಗಳ ಹೊರಗೆ ಒಂದು ಸಣ್ಣ ಪಾತ್ರೆಯಲ್ಲಿ ನೀರು ಇಡುವುದರಿಂದ ಬಾಯಾರಿದ ಹಕ್ಕಿಗಳಿಗೆ ಜೀವದಾನ ಮಾಡಿದಂತಾಗುತ್ತದೆ. ಇಂತಹ ದಿನಗಳಲ್ಲಿ ಕರುಣೆ ನಮ್ಮನ್ನು ಮುನ್ನಡೆಸಲಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಷೇರು ಮಾರುಕಟ್ಟೆ: ಭಾರತವನ್ನು ಹಿಂದಿಕ್ಕಿ ತೈವಾನ್ 5ನೇ ಸ್ಥಾನಕ್ಕೇರಿದ್ದು ಹೇಗೆ?ನಾಳೆ ರಾಜ್ಯಪಾಲ ಗೆಹಲೋತ್ ಭೇಟಿಗೆ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ತಾಪಮಾನದ ಸ್ಥಿತಿ:
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ತೀವ್ರ ಉಷ್ಣಗಾಳಿ ಆವರಿಸಿದೆ. ಮಂಗಳವಾರ ಉತ್ತರ ಪ್ರದೇಶದ ಬಂದಾದಲ್ಲಿ ಗರಿಷ್ಠ 47.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

