ನವದೆಹಲಿ: ಭಾರತದ ಪ್ರಮುಖ ರಾಜ್ಯಗಳಲ್ಲಿ ಭೀಕರ ಬೇಸಿಗೆಯ ಉರಿಯುವ ಜ್ವಾಲೆ ಮುಂದುವರಿದಿದ್ದು, ಸಾರ್ವಜನಿಕರು ತತ್ತರಿಸುವಂತಾಗಿದೆ. ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ಬಹುತೇಕ ಭಾಗಗಳು ಈ ವಾರವಿಡೀ ತೀವ್ರತರವಾದ ಬಿಸಿಗಾಳಿಯ (Heatwave) ಕಠಿಣ ಪರಿಸ್ಥಿತಿಯನ್ನು ಎದುರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಕನಿಷ್ಠ ಮೇ 28ರವರೆಗೆ ಹಲವು ರಾಜ್ಯಗಳಲ್ಲಿ 'ತೀವ್ರ ಬಿಸಿಲಿನ ತಾಪ' ಇರಲಿದೆ ಎಂದು ಎಚ್ಚರಿಸಿದೆ.
ಆದರೆ, ಇದೇ ವೇಳೆ ದೇಶದ ರಾಜಧಾನಿ ದೆಹಲಿ ಹಾಗೂ ಎನ್ಸಿಆರ್ ಸುತ್ತಮುತ್ತಲಿನ ಭಾಗಗಳಲ್ಲಿ ವಾರಾಂತ್ಯದ ವೇಳೆಗೆ ಸಾಧಾರಣ ಮಳೆ, ಗುಡುಗು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ತಾಪಮಾನದಲ್ಲಿ ಹಂತಹಂತವಾಗಿ ಇಳಿಕೆಯಾಗುವ ಮೂಲಕ ಸಾರ್ವಜನಿಕರಿಗೆ ಕೊಂಚ ನಿರಾಳತೆ ಸಿಗುವ ಆಶಾವಾದವೂ ಮೂಡಿದೆ. ಅಲ್ಲದೆ, ಕರ್ನಾಟಕದಲ್ಲೂ ಭಾರಿ ಮಳೆಯಾಗುವ ಮನ್ಸೂಚನೆ ಸಿಕ್ಕಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮೇ 28ರವರೆಗೆ ವಾಯುವ್ಯ ಮತ್ತು ಮಧ್ಯ ಭಾರತದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ನಿರೀಕ್ಷೆಯಿಲ್ಲ. ಆದಾಗ್ಯೂ, ಮೇ 29ರಿಂದ ಕೆಲವು ಪ್ರದೇಶಗಳಲ್ಲಿ ತಾಪಮಾನವು ಹಂತಹಂತವಾಗಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದ್ದು, ವಾರಾಂತ್ಯದ ವೇಳೆಗೆ ಜನರಿಗೆ ಕೊಂಚ ಸಮಾಧಾನ ತರಲಿದೆ. ಇನ್ನು ಭಾನುವಾರ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಬ್ರಹ್ಮಪುರಿಯಲ್ಲಿ ದೇಶದಲ್ಲೇ ಅತಿ ಗರಿಷ್ಠ ಅಂದರೆ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್ಗಢ ಮತ್ತು ದೆಹಲಿಯ ಹಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಹೆಚ್ಚಾಗಿಯೇ ಮುಂದುವರಿದಿದೆ.
ಇನ್ನೂ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಮೇ 27 ರವರೆಗೆ ತೀವ್ರ ಯೆಲ್ಲೋ/ರೆಡ್ ಅಲರ್ಟ್ನೊಂದಿಗೆ ಬಿಸಿಗಾಳಿ ಮುಂದುವರಿಯಲಿದೆ. ಇನ್ನು ರಾಜಸ್ಥಾನದಲ್ಲಿ ಮೇ 30 ರವರೆಗೆ ಸುಡುವ ಬಿಸಿಲು ಸಾರ್ವಜನಿಕರನ್ನು ಕಾಡಲಿದೆ. ಉತ್ತರ ಪ್ರದೇಶದಲ್ಲೂ ಮೇ 28 ರವರೆಗೆ ಪ್ರಚಂಡ ಶಾಖ ಇರಲಿದ್ದು, ವಿಶೇಷವಾಗಿ ರಾಜ್ಯದ ಪೂರ್ವ ಭಾಗಗಳಲ್ಲಿ ಮೇ 25 ಮತ್ತು 26 ರಂದು ಅತ್ಯಂತ ಭೀಕರ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದರೊಂದಿಗೆ ಮಧ್ಯಪ್ರದೇಶ ಮತ್ತು ವಿದರ್ಭ ಪ್ರದೇಶಗಳು ಸಹ ಈ ವಾರದ ಬಹುಪಾಲು ದಿನಗಳಲ್ಲಿ ತೀವ್ರ ಬಿಸಿಗಾಳಿಗೆ ಸಾಕ್ಷಿಯಾಗಲಿವೆ. ಇನ್ನುಳಿದಂತೆ ಛತ್ತೀಸ್ಗಢ, ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಮುಂಬರುವ ಕೆಲವು ದಿನಗಳ ಕಾಲ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಹಗಲಿನ ಧಗಧಗದ ಜೊತೆಗೆ, ಸೋಮವಾರದಂದು ಉತ್ತರ ಪ್ರದೇಶ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ರಾತ್ರಿಯ ವೇಳೆಯೂ ಸಹ ಅತಿಯಾದ ಉಷ್ಣಾಂಶ ಇರಲಿದ್ದು, ಸೆಕೆಯಿಂದ ಕೂಡಿದ ವಾತಾವರಣ ಇರಲಿದೆ ಎಂದು ತಿಳಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಭಾರಿ ಮಳೆ
ಒಂದೆಡೆ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭೀಕರ ಬಿಸಿಲ ಬೇಗೆ ಮುಂದುವರಿದಿದ್ದರೆ, ಮತ್ತೊಂದೆಡೆ ಈಶಾನ್ಯ ಹಾಗೂ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯ ಪ್ರಕಾರ, ಸೋಮವಾರದಂದು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆ ಮುಂದುವರಿಯಲಿದ್ದು, ಅರುಣಾಚಲ ಪ್ರದೇಶದಲ್ಲಿ ಮಂಗಳವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣದ ರಾಜ್ಯವಾದ ಕೇರಳದ ಪ್ರಾದೇಶಿಕ ಹವಾಮಾನ ಕೇಂದ್ರವು, ಸೋಮವಾರದಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ಇಡೀ ರಾಜ್ಯಾದ್ಯಂತ 'ಯೆಲ್ಲೋ ಅಲರ್ಟ್' ಘೋಷಿಸಿದೆ.
ದೆಹಲಿಯಲ್ಲೂ ವರುಣನ ಆಗಮನ
ರಾಜಧಾನಿ ದೆಹಲಿಯಲ್ಲಿ ಮಂಗಳವಾರವೂ ಸಹ ಸುಡುವ ಬಿಸಿಲು ಮುಂದುವರಿಯುವ ಸಾಧ್ಯತೆಯಿದೆ. ಆದಾಗ್ಯೂ, ಹವಾಮಾನ ಇಲಾಖೆಯು ದಿನದ ಉತ್ತರಾರ್ಧದಲ್ಲಿ ಅಥವಾ ಸಂಜೆಯ ವೇಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಅತ್ಯಂತ ಹಗುರವಾದ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನವು ಮುಂಬರುವ ಕೆಲವು ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಇರಲಿದ್ದು, ವಾರಾಂತ್ಯದ ವೇಳೆಗೆ ತಾಪಮಾನದಲ್ಲಿ ಹಂತಹಂತವಾಗಿ ಇಳಿಕೆಯಾಗುವ ನಿರೀಕ್ಷೆಯಿದೆ. ಸೋಮವಾರದಂದು ದೆಹಲಿಯಲ್ಲಿ ಗರಿಷ್ಠ ತಾಪಮಾನವು 43 ಡಿಗ್ರಿ ಸೆಲ್ಸಿಯಸ್ನಿಂದ 45 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುವ ಸಾಧ್ಯತೆಯಿದೆ. ಇನ್ನು ಕನಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ನಿಂದ 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಇದು ವಾರದ ಆರಂಭದಲ್ಲಿ ದೆಹಲಿ ಜನರಿಗೆ ತೀವ್ರ ಸೆಕೆ ಮತ್ತು ಬಿಸಿಯ ವಾತಾವರಣವನ್ನು ತಂದೊಡ್ಡಲಿದೆ.
ಆರೋಗ್ಯದ ಮೇಲೆ ಎಚ್ಚರ
ಭೀಕರ ಬಿಸಿಲಿನ ವಾತಾವರಣಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ನಿರ್ಜಲೀಕರಣ, ಸ್ನಾಯುಗಳ ಸೆಳೆತ, ತೀವ್ರ ಆಯಾಸ ಮತ್ತು ಹೀಟ್ಸ್ಟ್ರೋಕ್ (ಬಿಸಿಲಿನ ಆಘಾತ) ಉಂಟಾಗುವ ಅಪಾಯವಿರುತ್ತದೆ. ಅತಿಯಾದ ಸುಸ್ತು, ತಲೆತಿರುಗುವಿಕೆ, ತಲೆನೋವು, ವಾಕರಿಕೆ, ವಾಂತಿ ಮತ್ತು ಸ್ನಾಯು ನೋವು ಇದರ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ದೇಹದ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾದಾಗ ಹೀಟ್ಸ್ಟ್ರೋಕ್ ಸಂಭವಿಸುತ್ತದೆ ಮತ್ತು ಇದಕ್ಕೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ಜೀವಕ್ಕೇ ಕುತ್ತು ಬರಬಹುದು. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಸದಾ ಹೆಚ್ಚು ನೀರು ಕುಡಿಯುವ ಮೂಲಕ ದೇಹದಲ್ಲಿ ತೇವಾಂಶ ಕಾಯ್ದುಕೊಳ್ಳಬೇಕು, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ನೇರವಾಗಿ ಓಡಾಡುವುದನ್ನು ತಪ್ಪಿಸಬೇಕು, ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು ಮತ್ತು ಲಕ್ಷಣಗಳು ಉಲ್ಬಣಗೊಂಡರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಲಾಗಿದೆ.
ಮಳೆಗಾಲ ಮುನ್ನೆಚ್ಚರಿಕೆ
ಮಳೆಗಾಲವು ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಮತ್ತು ಅಪಘಾತಗಳ ತಡೆಗಟ್ಟುವಿಕೆಗಾಗಿ ಸಾರ್ವಜನಿಕರು ಕೆಲವು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಂತ ಮುಖ್ಯವಾಗಿದೆ. ಈ ಅವಧಿಯಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಟೈಫಾಯ್ಡ್ನಂತಹ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕು ಹಾಗೂ ಸದಾ ಕಾಯಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯಬೇಕು. ಬಿರುಗಾಳಿ ಸಹಿತ ಮಳೆ ಬರುವಾಗ ಹಳೆಯ ಕಟ್ಟಡಗಳು, ಮರಗಳು ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು ಮತ್ತು ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರು ಅತಿ ವೇಗಕ್ಕೆ ಬ್ರೇಕ್ ಹಾಕಿ ಜಾಗರೂಕರಾಗಿ ಚಲಿಸಬೇಕು. ಯಾವುದೇ ತುರ್ತು ಸಂದರ್ಭ ಎದುರಾದರೂ ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಹಾಯವಾಣಿಯನ್ನು ಸಂಪರ್ಕಿಸಲು ಸಜ್ಜಾಗಿರಬೇಕು,

