ಕೋಝಿಕ್ಕೋಡ್: ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಯಾವುದೇ ನಾಯಕರನ್ನು ಬೆಂಬಲಿಸಿಲ್ಲ ಎಂದು ಯುಡಿಎಫ್ ಮೈತ್ರಿಕೂಟದ ಭಾಗವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಪಕ್ಷದ ನಾಯಕ ಎಂ.ಕೆ. ಮುನೀರ್ ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ವಿ. ಡಿ.ಸತೀಶನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅನ್ನು ಮುನ್ನಡೆಸಿದ್ದರು ಎಂಬ ಐಯುಎಂಎಲ್ ಪಕ್ಷದ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಲ್ ಅವರ ಹೇಳಿಕೆಯ ಕುರಿತು ಮಾಧ್ಯಮ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಕೆಲವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸತೀಸನ್ ಅವರಿಗೆ ಪಕ್ಷ ಬೆಂಬಲ ನೀಡುತ್ತಿದೆ ಎಂಬ ರೀತಿ ವ್ಯಾಖ್ಯಾನಿಸಿದ್ದಾರೆ. ಈ ವಿಷಯದಲ್ಲಿ ಪಕ್ಷವು ಯಾವುದೇ ಆದ್ಯತೆಯನ್ನು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ತಂಗಲ್ ಏನನ್ನೂ ಹೇಳಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದಷ್ಟೇ ಅವರು ಹೇಳಿದ್ದರು'ಎಂದು ಮುನೀರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸಮರ್ಥ ನಾಯಕತ್ವವನ್ನು ಹೊಂದಿದೆ. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ವಿಳಂಬವಿಲ್ಲದೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಯುಡಿಎಫ್ ಸರ್ಕಾರವು ತಮ್ಮ ಪಕ್ಷದ ನಿಯಂತ್ರಣದಲ್ಲಿರುತ್ತದೆ ಎಂಬ ಸಂಕಥನವನ್ನು ಪ್ರಚಾರ ಮಾಡುವ ಮೂಲಕ ಐಯುಎಂಎಲ್ ಸುತ್ತಲೂ ಭಯ ಹುಟ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ.
'ಸರ್ಕಾರದಲ್ಲಿ ಐಯುಎಂಎಲ್ ಪಾತ್ರ ಇರಬಾರದು ಎಂದು ಕೆಲವರು ಬಯಸುತ್ತಾರೆ. ಐಯುಎಂಎಲ್ ಪಕ್ಷಕ್ಕೆ ಗೃಹ ಖಾತೆ ಸಿಕ್ಕರೆ ಗಲಭೆ ನಡೆಯುತ್ತವೆ ಎಂದು ಹೇಳುತ್ತಾರೆ. ಶಿಕ್ಷಣ ಖಾತೆಯನ್ನು ಐಯುಎಂಎಲ್ಗೆ ನೀಡಿದರೆ, ಮುಸ್ಲಿಂ ಶಾಲೆಗಳಿಗೆ ಮಾತ್ರ ಅನುಮತಿ ಸಿಗುತ್ತದೆ ಎಂದು ಭಾವಿಸುತ್ತಾರೆ. ಸರ್ಕಾರವು ಜಮಾತೆ-ಇ-ಇಸ್ಲಾಮಿಯ ನೆರಳಲ್ಲಿ ನಡೆಯುತ್ತದೆ' ಎಂಬುದು ಕೆಲವರ ಊಹೆಯಾಗಿದೆ ಎಂದಿದ್ದಾರೆ.
ಇಂತಹ ಸಂಕಥನಗಳು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವ, ಜನರನ್ನು ಇಬ್ಭಾಗಿಸುವ ಗುರಿ ಹೊಂದಿವೆ ಎಂದು ಮುನೀರ್ ಹೇಳಿದ್ದಾರೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಮತದಾನ ನಡೆದಿತ್ತು. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಮೇ 4 ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ.

