ತಿರುವನಂತಪುರ: ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರತನ್ ಯು. ಕೇಳ್ಕರ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವಿಚಾರವಾಗಿ ಸಿಪಿಎಂ, ಸಿಪಿಐ ಮತ್ತು ಬಿಜೆಪಿ ವಾಗ್ದಾಳಿ ನಡೆಸಿವೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಕೇಳ್ಕರ್ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿರುವುದಕ್ಕೆ ವಿಪಕ್ಷಗಳು ಸರ್ಕಾರವನ್ನು ಟೀಕಿಸಿವೆ.
ಕೇಳ್ಕರ್ ಅವರು ವರ್ಗಾವಣೆಯಾದ ಮರುದಿನವೇ ಮುಖ್ಯಮಂತ್ರಿ ಅವರ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ಚಿತ್ರಗಳನ್ನು ಮುಖ್ಯಮಂತ್ರಿ ಕಚೇರಿ ಪ್ರಕಟಿಸಿದೆ. ಭಾನುವಾರವಾಗಿದ್ದರೂ, ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಸತೀಶನ್ ಅವರು ಸೂಚನೆ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
'ಈ ಬೆಳವಣಿಗೆಯು ಕಾಂಗ್ರೆಸ್ನ ಅವಕಾಶವಾದಿ ರಾಜಕಾರಣದ ಭಾಗವಾಗಿದ್ದು, ಈ ಬಗ್ಗೆ ರಾಹುಲ್ ಗಾಂಧಿ ತಕ್ಷಣ ಪ್ರತಿಕ್ರಿಯೆ ನೀಡಬೇಕು' ಎಂದು ಬಿಜೆಪಿ ನಾಯಕ ವಿ.ಮುರಳೀಧರನ್ ಅವರು ಆಗ್ರಹಿಸಿದರು.
'ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಕ್ಕಾಗಿ ಆಯೋಗದಲ್ಲಿದ್ದವರಿಗೆ ಬಹುಮಾನ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಹಾಗಾದರೆ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಲು ಸಹಾಯ ಮಾಡಿದ್ದಕ್ಕಾಗಿ ಕೇಳ್ಕರ್ ಅವರ ನೇಮಕಾತಿ ನಡೆದಿದೆಯೇ' ಎಂದು ಪ್ರಶ್ನಿಸಿದರು.
'ಇಲ್ಲವೆಂದಾದರೆ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದ ಜನರ ಕ್ಷಮೆ ಕೇಳಲು ಸಿದ್ಧರಾಗಲಿ' ಎಂದು ಆಗ್ರಹಿಸಿದರು.
'ಬಿಜೆಪಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಇಂಥ ನೇಮಕಾತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದರು. ಆದರೆ ಕೇರಳದಲ್ಲೂ ಇದು ನಡೆದಾಗ, ಕೆ.ಸಿ ವೇಣುಗೋಪಾಲ್ ಅವರು 'ಅದು ಅಧಿಕಾರದಲ್ಲಿರುವವರ ಜವಾಬ್ದಾರಿ' ಎಂದು ಹೇಳುತ್ತಾರೆ. ಕಾಂಗ್ರೆಸ್ ದ್ವಿಮುಖ ನಿಲುವನ್ನು ಇದು ಸ್ಪಷ್ಟಪಡಿಸುತ್ತದೆ' ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಅವರು ಟೀಕಿಸಿದ್ದಾರೆ.
ಯಾವುದಾದರೂ ಒಪ್ಪಂದದ ಭಾಗವಾಗಿ ಈ ನೇಮಕಾತಿ ನಡೆದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಂದಿನ ದಿನಗಳಲ್ಲಿ ಎಲ್ಲವೂ ಹೊರಬರಲಿವೆ' ಎಂದು ಹೇಳಿದ್ದಾರೆ.
ಸರ್ಕಾರವನ್ನು ಟೀಕಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು, 'ಚುನಾವಣಾ ಆಯೋಗದ ವಿವಾದಿತ ನೀತಿಗಳ ಪರವಾಗಿದ್ದ ಅಧಿಕಾರಿಯ ನೇಮಕವು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇರಳ ಸರ್ಕಾರವು ಬಿಜೆಪಿಯ ಹಾದಿಯಲ್ಲಿ ನಡೆಯುತ್ತಿದೆಯೇ' ಎಂದು ಪ್ರಶ್ನಿಸಿದರು.

