ದಿಲ್ಲಿಯಿಂದ ಪ್ರವಾಸಕ್ಕೆ ಬಂದ ನಾಲ್ವರು ಸದಸ್ಯರ ಕುಟುಂಬದ ಭಾಗವಾಗಿದ್ದ ಈ ಇಬ್ಬರು ಮೃತಪಟ್ಟಿದ್ದು, ತಂದೆ ಮತ್ತು ಮಗಳು ಪಾರಾಗಿದ್ದಾರೆ. ಈ ಅಪಘಾತದಲ್ಲಿ ಇದುವರೆಗೆ ಒಂಭತ್ತು ಮಂದಿ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಬದುಕುಳಿದ ವ್ಯಕ್ತಿಯೊಬ್ಬರು, ಹವಾಮಾನ ಹಠಾತ್ ಹದಗೆಟ್ಟು ಬಲವಾದ ಗಾಳಿ ಬೀಸಿದ ಪರಿಣಾಮ ದೋಣಿ ಡೋಲಯಮಾನವಾಗಿ ಮುಳುಗತೊಡಗಿದುದಾಗಿ ತಿಳಿಸಿದ್ದಾರೆ. "ನನ್ನ ಪತ್ನಿ, ಅತ್ತೆ ಮತ್ತು ಮೊಮ್ಮಗ ಕಣ್ಣು ಮಿಟುಕಿಸುವಷ್ಟರಲ್ಲಿ ಕಾಣೆಯಾಗಿದರು. ದೋಣಿ ಕೆಲವೇ ಕ್ಷಣಗಳಲ್ಲಿ ನೀರಿನಿಂದ ತುಂಬಿತು," ಎಂದರು.
"ಏನಾಗುತ್ತಿದೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಎಲ್ಲೆಡೆ ಕಿರುಚಾಟಗಳು ಕೇಳಿಸುತ್ತಿದ್ದವು. ದೋಣಿ ಮುಳುಗುತ್ತಿದ್ದಂತೆ ಜನರು ಸಹಾಯಕ್ಕಾಗಿ ಕೂಗುತ್ತಿದ್ದರು. ನಾನೂ ಮುಳುಗುತ್ತಿದ್ದೆ," ಎಂದು ಅವರು ಹೇಳಿದರು.
ಇನ್ನೊಬ್ಬ ಬದುಕುಳಿದ ಸೈಯದ್ ರಿಯಾಜ್ ಹುಸೇನ್, "ನಾನು ನೀರಿನ ಅಡಿಯಲ್ಲಿ ಸಿಲುಕಿಕೊಂಡಿದ್ದೆ. ಕೇವಲ ತಲೆ ಮಾತ್ರ ನೀರಿನ ಮೇಲಿದ್ದು ಉಸಿರಾಡಲು ಸಾಧ್ಯವಾಯಿತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ಸಿಲುಕಿದ್ದೆ. ನನ್ನ ಸುತ್ತ ಶವಗಳು ತೇಲುತ್ತಿರುವುದು ಕಾಣುತ್ತಿತ್ತು. ಕೊನೆಗೆ ರಕ್ಷಣಾ ಸಿಬ್ಬಂದಿ ನನ್ನನ್ನು ರಕ್ಷಿಸಿದರು," ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗಿನ ವೇಳೆಗೆ 24 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ IANS ವರದಿ ಮಾಡಿದೆ. ಐದು ಮಕ್ಕಳು ಸೇರಿದಂತೆ ಒಂಭತ್ತು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಹುಸೇನ್ ಅವರ ಕುಟುಂಬದ ಸದಸ್ಯರೂ ಕಾಣೆಯಾದವರಲ್ಲಿ ಸೇರಿದ್ದಾರೆ.
ಸ್ಥಳೀಯ ಪೊಲೀಸರು, ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಲೈಫ್ ಜಾಕೆಟ್ ಧರಿಸಿದ್ದ ಕ್ರೂಸ್ ಬೋಟ್ ಕ್ಯಾಪ್ಟನ್ ಮಹೇಶ್ ಪಟೇಲ್ ದುರಂತದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

