ನವದೆಹಲಿ: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿ ಪ್ರಾಣತ್ಯಾಗ ಮಾಡಿದ ಇಬ್ಬರು ಭಾರತೀಯ ಯೋಧರನ್ನು ಅಂತರರಾಷ್ಟ್ರೀಯ ವಿಶ್ವಸಂಸ್ಥೆ ಶಾಂತಿಪಾಲನಾ ದಿನದ ಅಂಗವಾಗಿ ಶುಕ್ರವಾರ ಮರಣೋತ್ತರವಾಗಿ ಗೌರವಿಸಲಾಯಿತು. ಅವರ ಅಪೂರ್ವ ಸೇವೆ, ತ್ಯಾಗ ಮತ್ತು ಬಲಿದಾನವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿನ ವಿಶ್ವಸಂಸ್ಥೆಯ ಸ್ಥಿರೀಕರಣ ಮಿಷನ್ (ಒಔಓUSಅಔ) ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಲ್ಯಾನ್ಸ್ ಹವಾಲ್ದಾರ್ ಹರ್ಭಜನ್ ಸಿಂಗ್ ಹಾಗೂ ದಕ್ಷಿಣ ಸೂಡಾನ್ನಲ್ಲಿನ ವಿಶ್ವಸಂಸ್ಥೆ ಮಿಷನ್ನಲ್ಲಿ ಸೇವೆ ಸಲ್ಲಿಸಿದ್ದ ನಾಯಬ್ ಸುಬೇದಾರ್ ಸುಜೀತ್ ಕುಮಾರ್ ಪ್ರಧಾನ ಅವರಿಗೆ ಪ್ರತಿಷ್ಠಿತ 'ಡ್ಯಾಗ್ ಹ್ಯಾಮರ್ಸ್ಜೋಲ್ಡ್' ಪದಕವನ್ನು ಮರಣೋತ್ತರವಾಗಿ ಪ್ರದಾನಿಸಲಾಯಿತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಪದಕ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯ ಉತ್ತೇಜನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತೀಯ ಸೇನೆಯ ಮೇಜರ್ ಅಭಿಲಾಷಾ ಬರಾಕ್ ಅವರಿಗೆ 2025ನೇ ಸಾಲಿನ 'ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದ ಇಯರ್' ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಲೆಬನಾನ್ನಲ್ಲಿನ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UಓIಈIಐ) ಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವೇಳೆ ಮಹಿಳೆಯರ ಭಾಗವಹಿಸುವಿಕೆ ಮತ್ತು ಸಮುದಾಯದೊಂದಿಗೆ ಸಂಪರ್ಕ ವೃದ್ಧಿಸುವ ನಿಟ್ಟಿನಲ್ಲಿ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರ್ ವಿಭಾಗದ ಮೊದಲ ಮಹಿಳಾ ಪೈಲಟ್ಗಳಲ್ಲಿ ಒಬ್ಬರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರು ಪ್ರಸ್ತುತ ಲೆಬನಾನ್ನಲ್ಲಿ ಯುಎನ್ಐಎಫ್ಐಎಲ್ನ ಮಹಿಳಾ ತಂಡದ ತಂಡದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಪ್ರಶಸ್ತಿಗೆ ಪಾತ್ರರಾದ ಭಾರತದ ಮೂರನೇ ಅಧಿಕಾರಿ ಎಂಬ ಹೆಗ್ಗಳಿಕೆಗೆ ಮೇಜರ್ ಬರಾಕ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಮೇಜರ್ ಸುಮನ್ ಗವಾನಿ ಮತ್ತು ಮೇಜರ್ ರಾಧಿಕಾ ಸೇನ್ ಅವರಿಗೆ ಇದೇ ಗೌರವ ಲಭಿಸಿತ್ತು.

