ಅವುಗಳಲ್ಲಿ ಪ್ರಮುಖವಾದ ಅಂಶಗಳು ಇಲ್ಲಿವೆ.
1. ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಲೇ ಆರಂಭಿಸಿತು. ಭಾರತವು ರಕ್ಷಣೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ವಲಯಗಳಲ್ಲಿ ಎಲ್ಲದಕ್ಕೂ ಹೊರ ದೇಶಗಳನ್ನು ಅವಲಂಬಿಸುವುದನ್ನು ತಪ್ಪಿಸಲು ಮುಂದಾಯಿತು, ದೇಶಿಯತೆ ಮೂಲಕ ಜಾಗತಿಕ ಉತ್ಪಾದನಾ ಕೇಂದ್ರವಾಗುವ ಜತೆಗೆ ಸ್ವಾವಲಂಬಿ ಆರ್ಥಿಕ ದೇಶವಾಗಿ ಪರಿವರ್ತನೆ ಮಾಡುವ ಗುರಿ ಇಟ್ಟುಕೊಂಡಿತ್ತು. ಈವರೆಗೂ ಆರ್ಥಿಕ ಪ್ರಗತಿ ಜತೆಗೆ ಹಲವು ಕ್ಷೇತ್ರದಲ್ಲಿ ಉತ್ಪಾದನೆ ಪ್ರಮಾಣವೂ ಹೆಚ್ಚಾಗಿ ಉದ್ಯೋಗ ವೃದ್ದಿಸುವ ಪ್ರಯತ್ನ ಮಾಡಲಾಗಿದೆ.
2. ಡಿಜಿಟಲ್ ಅನ್ನುವುದು ಈಗ ಪ್ರತಿಯೊಬ್ಬರ ಆದ್ಯತೆಯಾಗಿ ಪರಿವರ್ತನೆಗೊಂಡಿದೆ. ದಿನ ನಿತ್ಯದ ಚಟುವಟಿಕೆಗಳಿಗೆ ಸುಲಭ ದಾರಿಯಾಗಿಯೂ ಮಾರ್ಪಟ್ಟಿದೆ. ಮಾಹಿತಿ ಮಾತ್ರವಲ್ಲದೇ ಆರ್ಥಿಕ ವಹಿವಾಟು, ಉದ್ಯೋಗದ ಪರ್ಯಾಯ ಮಾರ್ಗವಾಗಿಯೂ ಡಿಜಿಟಲ್ ಹೊಸ ದಾರಿ ತೋರಿಸಿಕೊಟ್ಟಿದೆ. ಬ್ಯಾಂಕ್ ಖಾತೆಗಳ ಆರಂಭ, ನೇರ ನಗದು ವರ್ಗಾವಣೆಯಂಥ ಚಟುವಟಿಕೆಗಳು ಹೆಚ್ಚಾಗಿ ಆರ್ಥಿಕ ಒಳಗೊಳ್ಳುವಿಕೆಗೂ ದಾರಿಯಾಗಿದೆ.
3. ರೈಲ್ವೆ ಸಂಪರ್ಕ ಜಾಲದಲ್ಲೂ ಹೆಚ್ಚಿನ ಪ್ರಗತಿ ಆಗಿದೆ. ಅದರಲ್ಲೂ ವಂದೇ ಭಾರತ್ ನಂತರ ರೈಲುಗಳು ನಾಲ್ಕು ವರ್ಷದಲ್ಲೇ ದೇಶದ ಪ್ರಮುಖ ನಗರಗಳ ಸಂಪರ್ಕ ಜಾಲವನ್ನು ವೃದ್ದಿಸಿ ಜನ ಕಡಿಮೆ ಅವಧಿಯಲ್ಲಿ ದೂರದ ಅವಧಿಯನ್ನು ಹೊರೆಯಿಲ್ಲದೇ ತಲುಪಲು ದಾರಿಯಾಗಿದೆ. ಹಗಲು ಮಾತ್ರವಲ್ಲದೇ ರಾತ್ರಿ ವೇಳೆಯೂ ವಂದೇ ಭಾರತ್ ರೈಲು ಸೇವೆ ಆರಂಭಗೊಂಡಿದೆ. ಇದಲ್ಲದೇ ರೈಲ್ವೆ ಮೂಲಸೌಕರ್ಯವನ್ನು ಹೆಚ್ಚಿಸಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
4. ದೇಶದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಬೇಕಾದ ಹೆದ್ಧಾರಿಗಳ ಸುಧಾರಣೆಗೆ ಸರ್ಕಾರ ಒತ್ತು ನೀಡಿದೆ. ಪ್ರಮುಖ ಕಾರಿಡಾರ್ಗಳನ್ನು ನಿರ್ಮಿಸಲಾಗಿದ್ದು, ಹೆಚ್ಚಿನವು ಬಳಕೆಯಲ್ಲಿವೆ. 12 ವರ್ಷದ ಅವಧಿಯಲ್ಲಿ ಹೆದ್ಧಾರಿ ನಿರ್ಮಾಣ ಪ್ರಮಾಣ 90 ಸಾವಿರ ಕಿ.ಮೀನಿಂದ ಸುಮಾರು 1.50 ಲಕ್ಷ ಕಿ.ಮೀಗೆ ಏರಿಕೆಯಾಗಿದೆ.
5 ಸ್ವಚ್ಛ ಭಾರತ ಯೋಜನೆಗೆ ಹೊಸ ರೂಪ ನೀಡಿ ಜನರ ಪಾಲ್ಗೊಳ್ಳುವಿಕೆ ಒತ್ತು ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಸ ವಿಂಗಡಣೆ, ನಿರ್ವಹಣೆ ವೈಜ್ಞಾನಿಕ ವಿಲೇವಾರಿಗೆ ಒತ್ತು ನೀಡಲಾಗಿದೆ. ಮಲಿನ ನೀರು ಸಂಸ್ಕರಣೆಗೂ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.
6. ಜನರಿಗೆ ಮನೆಯಲ್ಲಿಯೇ ನಲ್ಲಿ ಮೂಲಕ ಶುದ್ದ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಎಲ್ಲಾ ರಾಜ್ಯಗಳಲ್ಲೂ ಜಲಜೀವನ್ ಮಿಷನ್ ಜಾರಿಗೊಳಿಸಲಾಗುತ್ತಿದೆ. ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಮೂಲಗಳನ್ನು ಗುರುತಿಸಿ ಸಾಗಣೆ ಜತೆಗೆ ವಿತರಣೆಗೆ ಪೂರಕವಾದ ಟ್ಯಾಂಕ್ ಸಹಿತ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರಿಂದ ಗ್ರಾಮಾಂತರ ಭಾಗದಲ್ಲೂ ಕುಡಿಯುವ ನೀರು ಲಭ್ಯವಾಗುತ್ತಿದೆ.
7. ತಂತ್ರಜ್ಞಾನ ಮಾತ್ರವಲ್ಲದೇ ಮೂಲ ವಿಜ್ಞಾನ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳನ್ನು ಭಾರತ ಕಂಡಿದೆ. ಚಂದ್ರಯಾನದಂಥ ಪ್ರಯತ್ನದಲ್ಲಿ ಭಾರತ ಯಶಸ್ಸು ಕಂಡಿದೆ. ಶಿಕ್ಷಣ, ಹವಾಮಾನ ಸಹಿತ ಹಲವು ಕ್ಷೇತ್ರಗಳ ಸಮಗ್ರ ಬೆಳವಣಿಗೆ ದೃಷ್ಟಿಯಲ್ಲಿ ಹಲವಾರು ಉಪಗ್ರಹಗಳ ಉಡಾವಣೆ ಹಾಗೂ ಅವುಗಳ ಸಮರ್ಪಕ ಬಳಕೆಗೂ ಒತ್ತು ಕೊಡಲಾಗಿದೆ.
8. ವಿದೇಶಾಂಗ ನೀತಿ ಜಾರಿ ವಿಚಾರದಲ್ಲಿ ಗಮನ ನೀಡಲಾಗಿದೆ. ಹಲವು ದೇಶಗಳೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ವೃದ್ದಿಯಾಗಿದೆ. ಹಲವು ರೀತಿಯ ದ್ವಿಪಕ್ಷೀಯ ಒಪ್ಪಂದಗಳಿಗೆ ಆದ್ಯತೆ ದೊರೆತಿದೆ. ಜಗತ್ತಿನ ಹಲವು ದೇಶಗಳಲ್ಲಿ ತಲೆದೋರಿರುವ ಯುದ್ದದ ಸಂಘರ್ಷ, ಬಿಕ್ಕಟ್ಟು, ಆರ್ಥಿಕ ಹೊರೆ ನಡುವೆಯೂ ಭಾರತ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದೆ.
9. ಮಹಿಳೆಯರ ಸಬಲೀಕರಣ ವಿಚಾರದಲ್ಲೂ ಹಲವಾರು ಸುಧಾರಣೆಗಳು ಆಗಿವೆ. ಮಹಿಳೆಯರ ಬದುಕು ಸುಧಾರಣೆ ನಿಟ್ಟಿನಲ್ಲಿ ಹೊಸ ಯೋಜನೆಗಳು, ಅನಿಲ ಒದಗಿಸುವ ಉಜ್ವಲ ಯೋಜನೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಬೇಟಿ ಪಡಾವೋ ಬೇಟಿ ಬಚಾವೋದಂಥ ಯೋಜನೆಗಳು ಜಾರಿಯಾಗಿವೆ.
10. ಜನರ ಆರೋಗ್ಯ, ಚಿಕಿತ್ಸೆಯನ್ನು ಪ್ರಮುಖ ವಲಯವಾಗಿ ಗುರುತಿಸಿ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರು, ಹಿರಿಯರಿಗೆ ವಾರ್ಷಿಕವಾಗಿ ₹5 ಲಕ್ಷ ವರೆಗೂ ಉಚಿತ ಚಿಕಿತ್ಸಾ ವೆಚ್ಚವನ್ನು ಭರಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹೆಚ್ಚಿನ ಜನರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲೂ ಸುಧಾರಣೆ ತರುವ ಪ್ರಯತ್ನಗಳು ನಡೆದಿವೆ.

