ವಿಶ್ವಸಂಸ್ಥೆ : ಇರಾನ್ನಲ್ಲಿ ಯುದ್ಧ ಆರಂಭಗೊಂಡ ಬಳಿಕ 10 ಲಕ್ಷಕ್ಕೂ ಅಧಿಕ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಸಂಸ್ಥೆ ತಿಳಿಸಿದೆ.
ಸಂಘರ್ಷ ಉಲ್ಬಣಗೊಂಡು ತೈಲ ಬೆಲೆ ಹೆಚ್ಚಾದರೆ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
'ವಿಶ್ವದ ಮೂರು ದುರ್ಬಲ ದೇಶಗಳಾದ ಸೋಮಾಲಿಯಾದ 25 ಲಕ್ಷ, ಅಫ್ಗಾನಿಸ್ತಾನದ 23 ಲಕ್ಷ ಹಾಗೂ ಶ್ರೀಲಂಕಾದ 13 ಲಕ್ಷ ಮಂದಿ ಅಗತ್ಯ ಆಹಾರ ಪಡೆಯಲು ನಿತ್ಯವೂ ಹೆಣಗಾಡುತ್ತಿದ್ದಾರೆ' ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್ಪಿ) ವಿಶ್ಲೇಷಣಾತ್ಮಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜೂನ್ ಅಂತ್ಯದ ವೇಳೆಗೆ ವಿಶ್ವದಲ್ಲಿ ಹೆಚ್ಚುವರಿಯಾಗಿ 4.5 ಕೋಟಿ ಮಂದಿ ಆಹಾರ ಕೊರತೆ ಎದುರಿಸಲಿದ್ದಾರೆ. ಈಗಾಗಲೇ 31.8 ಕೋಟಿ ಮಂದಿ ಆಹಾರದ ಅಭದ್ರತೆ ಎದುರಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದೆ ಎಂದು ತಿಳಿಸಿದೆ.
'ಬಡರಾಷ್ಟ್ರಗಳ ಜನರು ತಮ್ಮ ದುಡಿಮೆಯ ಎಲ್ಲ ಹಣವನ್ನು ಆಹಾರಕ್ಕಾಗಿಯೇ ವೆಚ್ಚ ಮಾಡುತ್ತಿದ್ದಾರೆ. ಬೆಲೆ ಏರಿಕೆಯಾಗಿರುವ ಕಾರಣ, ತಿನ್ನುವುದನ್ನು ಕೂಡ ಕಡಿಮೆ ಮಾಡಿದ್ದಾರೆ' ಎಂದು ಡಬ್ಲ್ಯುಎಫ್ಪಿ ಹಂಗಾಮಿ ಕಾರ್ಯಕಾರಿ ನಿರ್ದೇಶಕ ಕಾರ್ಲ್ ಸ್ಕಾವ್ ತಿಳಿಸಿದ್ದಾರೆ.
'ಇದು ನಮಗೆ ಸಿಕ್ಕಿರುವ ಮುನ್ಸೂಚನೆಯಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಂಘರ್ಷ ತೀವ್ರಗೊಂಡರೆ, ಈ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳಲಿದೆ' ಎಂದು ತಿಳಿಸಿದ್ದಾರೆ.
ಉಳಿದಂತೆ ಸುಡಾನ್, ಗಾಜಾ, ದಕ್ಷಿಣ ಲೆಬನಾನ್, ಯೆಮನ್, ಹೈಟಿ ನಗರಗಳಲ್ಲಿಯೂ ಕೂಡ ಆಹಾರದ ತೀವ್ರ ಕೊರತೆ ಎದುರಿಸುತ್ತಿವೆ ಎಂದು ಒತ್ತಿ ಹೇಳಿದ್ದಾರೆ.

