ಅಮೃತಸರ: 'ಆಪರೇಷನ್ ಬ್ಲೂ ಸ್ಟಾರ್'ನ 42ನೇ ವರ್ಷಾಚರಣೆಯು ಶನಿವಾರ ಶಾಂತಿಯುತವಾಗಿ ನಡೆಯಿತು. ಸಿಖ್ ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರು, ಸಿಖ್ಖರ ಧಾರ್ಮಿಕ ಸ್ಥಳವಾದ 'ಅಕಾಲ್ ತಖ್ತ್'ನ ಹೊರಗೆ ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು.
ಮಾಜಿ ಸಂಸದ ಸಿಮ್ರನ್ಜಿತ್ ಸಿಂಗ್ ಮಾನ್ ಅವರ ನೇತೃತ್ವದಲ್ಲಿ ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು. ಮಾನ್ ಅವರೂ ಸ್ಥಳದಲ್ಲಿದ್ದರು.
ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಅಸ್ಸಾಂನಲ್ಲಿ ಜೈಲು ವಾಸ ಅನುಭವಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿ ನಾಯಕ ಹಾಗೂ ಖದೂರ್ ಸಾಹಿಬ್ ಕ್ಷೇತ್ರದ ಸಂಸದ ಅಮೃತ್ಪಾಲ್ ಸಿಂಗ್ ಬೆಂಬಲಿಗರೂ ಅವರ ಭಾವಚಿತ್ರಗಳನ್ನು ಹಿಡಿದು ಸ್ಥಳದಲ್ಲಿದ್ದರು.
ಸಿಖ್ ಮೂಲಭೂತವಾದಿ ಸಂಘಟನೆ ದಲ್ ಖಾಲ್ಸಾ ಕಾರ್ಯಕರ್ತರು, 'ಆಪರೇಷನ್ ಬ್ಲೂ ಸ್ಟಾರ್'ನಲ್ಲಿ ಹತ್ಯೆಯಾದ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಹಾಗೂ ಕಾರ್ಯಾಚಾರಣೆಯಲ್ಲಿ ಹಾನಿಗೊಂಡಿದ್ದ ಅಕಾಲ್ ತಖ್ತ್ನ ಚಿತ್ರಗಳನ್ನು ಪ್ರದರ್ಶಿಸಿದರು.
1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಲು 'ಆಪರೇಷನ್ ಬ್ಲೂ-ಸ್ಟಾರ್' ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿತ್ತು.
'ದಾಖಲೆಗಳನ್ನು ಸಾರ್ವಜನಿಕಗೊಳಿಸಿ'
ಚಂಡೀಗಢ: 'ಆಪರೇಷನ್ ಬ್ಲೂ ಸ್ಟಾರ್'ಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು' ಎಂದು ರಾಜ್ಯಸಭಾ ಸದಸ್ಯ ವಿಕ್ರಮ್ಜಿತ್ ಸಿಂಗ್ ಸಾಹ್ನಿ ಒತ್ತಾಯಿಸಿದ್ದಾರೆ. 'ಭಾರತ ಸರ್ಕಾರದ ಪ್ರಮುಖ ಕಡತಗಳನ್ನು ಸಾರ್ವಜನಿಕಗೊಳಿಸಿಲ್ಲ. ಸತ್ಯವನ್ನು ನಾಗರಿಕರಿಂದ ಮುಚ್ಚಿಡಲಾಗಿದೆ. 'ಆಪರೇಷನ್ ಬ್ಲೂ ಸ್ಟಾರ್' ನಡೆದು ಸುಮಾರು ನಾಲ್ಕು ದಶಕಗಳು ಕಳೆದಿವೆ. ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಬ್ರಿಟನ್ನಿನ ವಿಶೇಷ ಮಿಲಿಟರಿ ಪಡೆಯ ಸಹಾಯ ಕೋರಿದ್ದರು ಎಂದು ಇತ್ತೀಚೆಗೆ ಆ ದೇಶದ ಗುಪ್ತಚರ ದಾಖಲೆಗಳಿಂದ ತಿಳಿದು ಬಂದಿತು. ಆದರೆ ನಮ್ಮ ಸರ್ಕಾರದ ನಿರ್ಣಾಯಕ ಕಡತಗಳು ರಹಸ್ಯವಾಗಿ ಉಳಿದಿವೆ' ಎಂದು ಸಾಹ್ನಿ ಹೇಳಿದರು. 'ಬ್ಲೂ ಸ್ಟಾರ್' ಕಾರ್ಯಾಚರಣೆಯು ದಶಕಗಳಿಂದ ಪಂಜಾಬ್ನಲ್ಲಿ ಹಲವಾರು ಹಿಂಸಾಚಾರಗಳಿಗೆ ಕಾರಣವಾಗಿದೆ. ಸಿಖ್ ಧರ್ಮದ ಅತ್ಯಂತ ಪವಿತ್ರ ದೇವಾಲಯದ ಮೇಲಿನ ದಾಳಿಗೆ ಕಾರಣವಾದ ರಾಜಕೀಯ ಲೆಕ್ಕಾಚಾರಗಳು ಹಾಗೂ ಸೇನಾ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ' ಎಂದೂ ಹೇಳಿದರು.

