ಮುಂಬೈ: ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿದೆ. ಅದು ಒಟ್ಟು 17 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಜೂನ್ 18ರಂದು 17 ಸ್ಥಾನಗಳಿಗೆ ಮತದಾನ ನಡೆದಿತ್ತು.
ಆದರೆ ಮತದಾನಕ್ಕೂ ಮುನ್ನವೇ ಮಹಾಯುತಿಯ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ ಸಿಕ್ಕಿತ್ತು.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) 11 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಮೂರು ಸ್ಥಾನಗಳು ಮತ್ತು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎರಡು ಸ್ಥಾನಗಳನ್ನು ಗೆದ್ದುಕೊಂಡಿವೆ.
ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಈ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಗೆದ್ದ ಅಭ್ಯರ್ಥಿಗಳು
ಅವಿರೋಧವಾಗಿ ಆಯ್ಕೆಯಾದವರಲ್ಲಿ ಶಿವಸೇನೆಯ ರವೀಂದ್ರ ಫಾಟಕ್ (ಥಾಣೆ) ಮತ್ತು ದುಷ್ಯಂತ್ ಚತುರ್ವೇದಿ (ಯವತ್ಮಾಲ್), ಎನ್ಸಿಪಿಯ ಅನಿಕೇತ್ ತತ್ಕರೆ (ರಾಯಗಢ-ರತ್ನಗಿರಿ-ಸಿಂಧುದುರ್ಗ) ಮತ್ತು ವಿಕ್ರಮ್ ಕಾಕಡೆ (ಪುಣೆ), ಹಾಗೂ ಬಿಜೆಪಿಯ ಅರುಣ್ ಲಖಾನಿ (ವರ್ಧಾ-ಚಂದ್ರಾಪುರ-ಗಡ್ಚಿರೋಲಿ) ಮತ್ತು ಪ್ರಜಾಕ್ತ್ ತನ್ಪುರೆ (ಅಹಿಲ್ಯಾನಗರ) ಸೇರಿದ್ದಾರೆ.
ಬಿಜೆಪಿಯ ವಿಜೇತ ಅಭ್ಯರ್ಥಿಗಳು: ಸುಹಾಸ್ ಶಿರಸತ್ (ಛತ್ರಪತಿ ಸಂಭಾಜಿನಗರ-ಜಾಲ್ನಾ), ಅವಿನಾಶ್ ಬ್ರಾಹ್ಮಣಕರ್ (ಭಂಡಾರಾ-ಗೊಂಡಿಯಾ), ಧೈರ್ಯಶೀಲ್ ಕದಂ (ಸಾಂಗ್ಲಿ-ಸತಾರಾ), ರಾಜೇಂದ್ರ ರಾವತ್ (ಸೋಲಾಪುರ), ಬಸವರಾಜ ಪಾಟೀಲ್ (ಧಾರಾಶಿವ್-ಲಾತೂರ್-ಬೀಡ್), ರಾಜೀವ್ ಪೋತ್ದಾರ್ (ನಾಗಪುರ), ನಂದಕಿಶೋರ್ ಮಹಾಜನ್ (ಜಲಗಾಂವ್), ಪ್ರವೀಣ್ ಪೋತೆ (ಅಮರಾವತಿ) ಮತ್ತು ಅಮರ್ ರಾಜೂರ್ಕರ್ (ನಾಂದೇಡ್). ಶಿವಸೇನೆ ಅಭ್ಯರ್ಥಿ ಸೈಯದ್ ಖಾನ್ ಪರ್ಭಾನಿ-ಹಿಂಗೋಲಿ ಕ್ಷೇತ್ರದಿಂದ ಜಯಗಳಿಸಿದ್ದಾರೆ.
ಅಧಿಕೃತ ಮಹಾಯುತಿ ಅಭ್ಯರ್ಥಿ ಗೆಲ್ಲದ ಏಕೈಕ ಕ್ಷೇತ್ರವೆಂದರೆ ನಾಸಿಕ್. ಇಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಬಿಜೆಪಿ ಬಂಡಾಯ ನಾಯಕ ಗೋಕುಲ್ ಗೀತೆ, ಶಿವಸೇನೆಯ ಅಭ್ಯರ್ಥಿ ನರೇಂದ್ರ ದರಾದೆ ಅವರನ್ನು ಸೋಲಿಸಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಗೆಲುವು: ವಿರೋಧ ಪಕ್ಷಗಳ ವಾಗ್ದಾಳಿ
ನಾಸಿಕ್ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯು ಏಕನಾಥ ಶಿಂದೆ ನೇತೃತ್ವದ ಶಿವಸೇನೆಗೆ ಸೇರಿದ ಮಹಾಯುತಿಯ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿರುವುದಕ್ಕೆ ವಿರೋಧ ಪಕ್ಷದ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ನಾಸಿಕ್ನಲ್ಲಿ ಬಿಜೆಪಿಯೇ ಶಿವಸೇನೆ ಅಭ್ಯರ್ಥಿಯನ್ನು ಸೋಲಿಸಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಸತೇಜ್ (ಬಂಟಿ) ಪಾಟೀಲ್ ಎಚ್ಚರಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಶಿವಸೇನೆಯು ಬಿಜೆಪಿ ಅಭ್ಯರ್ಥಿಗಾಗಿ ಜಲಗಾಂವ್ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದನ್ನು ಅವರು ಉಲ್ಲೇಖಿಸಿದ್ದಾರೆ.

