ಕೋಲ್ಕತ್ತ: ಸರ್ಕಾರಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 4,000ಕ್ಕೂ ಅಧಿಕ ವಿದ್ಯುನ್ಮಾನ ಮತಯಂತ್ರಗಳು ಸುಟ್ಟು ಹೋಗಿವೆ ಎಂದು ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧುರಿ ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕೋಲ್ಕತ್ತದ ಅಲಿಪೋರ್ ಪ್ರದೇಶದ ಸರ್ಕಾರಿ ಕಟ್ಟಡದ 9ನೇ ಮಹಡಿಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ. ಈ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿ ಇತರೆ ಸರ್ಕಾರಿ ಕಚೇರಿಗಳೂ ಇದ್ದವು.
'ಅಗ್ನಿ ಅವಘಡದಲ್ಲಿ 4,000ಕ್ಕೂ ಅಧಿಕ ಇವಿಎಂಗಳು ನಾಶವಾಗಿವೆ. ಈ ವರ್ಷದ ವಿಧಾನಸಭೆ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಈ ಇವಿಎಂಗಳನ್ನು ಬಳಸಲಾಗಿತ್ತು' ಎಂದು ಸಚಿವರು ತಿಳಿಸಿದ್ದಾರೆ.
'ಇದು ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಂತೆ ಕಾಣುತ್ತಿಲ್ಲ. ವಿಧ್ವಂಸಕ ಕೃತ್ಯದ ಸಂಚಿರುವ ಬಗ್ಗ ಪರಿಶೀಲನೆ ನಡೆಸಲಾಗುತ್ತಿದೆ. 9ನೇ ಮತ್ತು 10ನೇ ಮಹಡಿಯಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಈಗಲೂ ಸ್ಪಷ್ಟತೆ ಸಿಕ್ಕಿಲ್ಲ. ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ, ಅದು ಏಳು, ಎಂಟು, ಒಂಬತ್ತು, ಹತ್ತನೇ ಮಹಡಿಗೆ ವ್ಯಾಪಿಸಿದೆ. ನಾಲ್ಕು, ಐದು ಮತ್ತು ಆರನೇ ಮಹಡಿಗೆ ಬೆಂಕಿ ಏಕೆ ವ್ಯಾಪಿಸಿಲ್ಲ ಎಂಬುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಒಂದು ನಿರ್ಧಾರಕ್ಕೆ ಬರಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

