ಬದಿಯಡ್ಕ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಕಸಾಪ ಕೇರಳ ಗಡಿನಾಡ ಘಟಕ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಮತ್ತು ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರ ದೇಲಂಪಾಡಿ, ಕಲಾಕುಂಚ ಕಾಸರಗೋಡು, ಗಿಳಿವಿಂಡು ಮಂಜೇಶ್ವರ, ಸ್ನೇಹರಂಗ ಕಾಸರಗೋಡು ಸಹಿತ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ(ಮೇ.31) ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಕವಿ, ವೈದ್ಯ, ಅರ್ಥಧಾರಿ ಡಾ.ರಮಾನಂದ ಬನಾರಿ 85ರ ಅಂಗವಾಗಿ ಕನ್ನಡ ಸಾಹಿತ್ಯ-ಸಂಸ್ಕøತಿ ಸಮ್ಮೇಳನ ಸಮಾರಂಭ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಸರಗೋಡಿನ ಕಣ್ಮಣಿ ಡಾ.ರಮಾನಂದ ಬನಾರಿ 85 ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸಾಧಕ ಶ್ರೇಷ್ಠರನ್ನು ಗೌರವಿಸಿದಾಗ ನಾಡು ಸಂಭ್ರಮಿಸುತ್ತದೆ. ಯಕ್ಷಗಾನ ತಾಳಮದ್ದಳೆ, ಸಾಹಿತ್ಯ ರಚನೆಗಳ ಮೂಲಕ ಡಾ.ರಮಾನಂದ ಬನಾರಿಯಾದಿ ಹಿರಿಯ ತಲೆಮಾರಿನವರು ಭಾಷೆಯ ಅಪಾರ ಸಾಧ್ಯತೆಯನ್ನು ಬಹುಮುಖದಲ್ಲಿ ದಾಖಲಿಸಿದವರು. ರಾಮಾಯಣಾದಿ ಮಹಾಕಾವ್ಯಗಳು ಪರಸ್ಪರ ಅವರ ಕಥಾನಕಗಳನ್ನು ಅವರವರಿಗೇ ಮೊದಲ ಶ್ರೋತೃಗಳಾಗಿ ಆಲಿಸುವ ರೀತಿಯಲ್ಲಿ ಚಿತ್ರಿಸಿರುವುದು ಕಾವ್ಯ ಪ್ರಪಂಚದ ವೈಶಿಷ್ಟ್ಯ. ಕಾಸರಗೋಡಿನ ಕಲೆ, ಕಾವ್ಯ ಕ್ಷೇತ್ರದ ಕೊಡುಗೆ ಮಹತ್ತರವಾದುದಾಗಿದ್ದು, ಹಲವು ವಿಷಯಗಳ ದಾಖಲೀಕರಣ ಅಗತ್ಯವಿದೆ ಎಂದವರು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ಮೋಹನ ಕುಂಟಾರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅಭಿನಂದನಾ ಭಾಷಣ ಮಾಡಿದರು. ಆಕಾಶವಾಣಿ ನಿಕಟಪೂರ್ವ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಕುಟ್ಟಿಯಾನ ಮುಹಮ್ಮದ್ ಅವರ ಕನಸುಗಳ ಭೂಮಿಗೆ ಯಾತ್ರೆ ಕೃತಿ ಬಿಡುಗಡೆಗೊಳಿಸಲಾಯಿತು. ಸಾಕ್ಷ್ಯಚಿತ್ರ ನಿರ್ಮಾಪಕ ಡಾ.ಪ್ರವೀಣ್ ರಾಜ್ ಎಸ್.ರಾವ್ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಯದೇವ ಖಂಡಿಗೆ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಿಜಯಲಕ್ಷ್ಮೀ ಶಾನುಭೋಗ್, ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ವಿಶಾಲಾಕ್ಷ ಪುತ್ರಕಳ, ಡಾ.ಯು.ಮಹೇಶ್ವರಿ ಹಾಗೂ ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಕಾಸರಗೋಡಿನ ಸಾಹಿತ್ಯದ ಸ್ಥೂಲ ಅವಲೋಕನದ ವಿಚಾರಗೋಷ್ಠಿಯಲ್ಲಿ ಡಾ,ವರದರಾಜ ಚಂದ್ರಗಿರಿ ಹಾಗೂ ಕಾಸರಗೋಡಿನ ಸಮಗ್ರ ಸಂಸ್ಕøತಿ ವಿಷಯದಲ್ಲಿ ಡಾ.ರತ್ನಾಕರ ಮಲ್ಲಮೂಲೆ ವಿಚಾರ ಮಂಡನೆ ನಡೆಸಿದರು. ಪ್ರೊ.ಪಿ.ಎನ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಪ್ರತಿಭಾ ಪ್ರದರ್ಶನ, ಕಲಾ ವೈಭವ, ಮೋಹಿನಿಯಾಟ್ಟಂ, ನಾಟ್ಯ ತರಂಗಿಣಿ ನಡೆಯಿತು. ಅಪರಾಹ್ನ ಡಾ.ಬನಾರಿ ಕಾವ್ಯ ಸತ್ವ-ಸ್ವತ್ವದ ಬಗ್ಗೆ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಗದ್ಯ ಮತ್ತು ಅರ್ಥಗಾರಿಕೆ ಬಗ್ಗೆ ಡಾ.ಧನಂಜಯ ಕುಂಬಳೆ, ಸಾಂಸ್ಕøತಿಕ ವಿಲೀನೀಕರಣದ ಬಗ್ಗೆ ಟಿ.ಎ.ಎನ್.ಖಂಡಿಗೆ, ನ್ಯಾಯಾಂಗದ ಮುಂದೆ ಕಾಸರಗೋಡಿನ ಸಮಸ್ಯೆ ಬಗ್ಗೆ ಎನ್.ಕೆ.ಮೋಹನದಾಸ್, ಕಾಸರಗೋಡಿನ ಸಂಘಟನೆಗಳ ಪಾತ್ರದ ಬಗ್ಗೆ ಡಾ.ಬಾಲಕೃಷ್ಣ ಹೊಸಂಗಡಿ, ಸಾಹಿತ್ಯ-ಸಂಸ್ಕøತಿಗಳ ಸಂವರ್ಧನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಶಿವಶಂಕರ ವಿಚಾರ ಮಂಡನೆ ನಡೆಸಿದರು. ಬಳಿಕ ಪ್ರತಿಭಾ ಪ್ರದರ್ಶನದ ಮುಂದುವರಿಕೆ ನಡೆಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.

.jpg)
.jpg)


