ನವದೆಹಲಿ: ಉನ್ನತ ಮಟ್ಟದ ಕಾರ್ಯಾಚರಣೆಗಳಿಗಾಗಿ ಸನ್ನದ್ಧತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಹೇಳಿದ್ದಾರೆ.
ನೌಕಾಪಡೆಯ ಮುಖ್ಯಸ್ಥರಾಗಿದ್ದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಸೇವೆಯಿಂದ ನಿವೃತ್ತರಾದ ಕಾರಣ, ಅವರ ಸ್ಥಾನಕ್ಕೆ ಸ್ವಾಮಿನಾಥನ್ ಅವರನ್ನು ಭಾನುವಾರ(ಮೇ 31) ಆಯ್ಕೆ ಮಾಡಲಾಗಿದೆ.
ಭಾರತದ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಭಾರತದ ನೌಕಾ ಪಡೆಯು ಸವಾಲಿನ, ಸಂಕೀರ್ಣ ಮತ್ತು ಅನಿರೀಕ್ಷಿತ ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ದವಾಗಿದೆ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ದಕ್ಕೆಯಾಗುವುದನ್ನು ತಡೆಯಲು ಯಾವುದೇ ರೀತಿಯ ಕಾರ್ಯಾಚರಣೆ ನಡೆಸಲು ಭಾರತೀಯ ನೌಕಾಪಡೆಯು ಯಾವಾಗಲೂ ಸಿದ್ದವಾಗಿದೆ' ಎಂದು ಹೇಳಿದ್ದಾರೆ.
ನೌಕಾಪಡೆಯ ಬಲವನ್ನು ಹೆಚ್ಚಿಸುವುದರ ಜೊತೆಗೆ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ನಮಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇವೆ. ಆತ್ಮನಿರ್ಭರ ಮತ್ತು ಸ್ವದೇಶಿ ತತ್ವಗಳಿಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಯಾರು ಈ ಸ್ವಾಮಿನಾಥನ್ ?:
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ, ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ದೂರಸಂಪರ್ಕದಲ್ಲಿ ಎಂಎಸ್ಸಿ ಮತ್ತು ಲಂಡನ್ನ ಕಿಂಗ್ಸ್ ಕಾಲೇಜಿನಿಂದ ರಕ್ಷಣಾ ಅಧ್ಯಯನದಲ್ಲಿ ಎಂಎ ಪದವಿ ಮಾಡಿರುವ ಸ್ವಾಮಿನಾಥನ್ ಅವರು 1987ರ ಜುಲೈನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದರು. ಅವರು ಸಂವಹನ ಮತ್ತು ತಂತ್ರಜ್ಞಾನ ಯುದ್ಧ ನೀತಿಯ ಪರಿಣಿತರಾಗಿದ್ದಾರೆ.
ನೌಕಾ ಪಡೆಯ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ಪಡೆದುಕೊಂಡಿದ್ದಾರೆ. ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುವ ವೇಳೆ ಹಲವು ಪ್ರಮುಖ ಕಾರ್ಯಾಚರಣೆಗಳು, ಸಿಬ್ಬಂದಿ ಮತ್ತು ತರಬೇತಿ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ. ಐಎನ್ಎಸ್ ವಿದ್ಯುತ್ ಐಎನ್ಎ ವಿನಾಶ್, ಐಎನ್ಎಸ್ ಕುಲಿಶ್, ಐಎನ್ಎಸ್ ಮೈಸೂರು ಮತ್ತು ಐಎನ್ಎಸ್ ವಿಕ್ರಮಾದಿತ್ಯಗಳ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸ್ವಾಮಿನಾಥನ್ ಅವರು ನೌಕಾಪಡೆಯ ಮುಖ್ಯಸ್ಥರಾಗುವ ಮೊದಲು, ಪಶ್ಚಿಮ ನೌಕಾ ಕಮಾಂಡ್ನ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.

