ಮಂಜೇಶ್ವರ: ರಾಜ್ಯ ಸರ್ಕಾರ ಪ್ರಸ್ತಾವಿತ ತಿರುವನಂತಪುರಂ-ಕಣ್ಣೂರು ಅತಿ ವೇಗ ರೈಲು ಯೋಜನೆಯನ್ನು ಮಂಗಳೂರುವರೆಗೆ ವಿಸ್ತರಿಸಬೇಕು ಎಂದು ಮುಸ್ಲಿಂ ಲೀಗ್ ಮಂಜೇಶ್ವರ ಕ್ಷೇತ್ರ ಕಾರ್ಯಕಾರಿ ಸಮಿತಿ ಸಭೆ ಒತ್ತಾಯಿಸಿದೆ. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಹಿಂದುಳಿದ ಸ್ಥಿತಿಯನ್ನು ನಿವಾರಿಸಲು ಹಾಗೂ ಉತ್ತರ ಮಲಬಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆಯನ್ನು ವಿಸ್ತರಿಸುವುದು ಸಹಾಯಕವಾಗಲಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಯೋಜನೆಯನ್ನು ಕಣ್ಣೂರಿನಲ್ಲಿ ಅಂತ್ಯಗೊಳಿಸುವುದು ಕಾಸರಗೋಡು ಜಿಲ್ಲೆಯ ಮೇಲಿನ ನಿರ್ಲಕ್ಷ್ಯವನ್ನು ಸಾರುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಪ್ರತಿದಿನ ಸಾವಿರಾರು ಜನರು ಚಿಕಿತ್ಸೆ ಮತ್ತು ಶಿಕ್ಷಣದ ಅಗತ್ಯಕ್ಕಾಗಿ ಕಾಸರಗೋಡು ಜಿಲ್ಲೆಯಿಂದ ಮಂಗಳೂರನ್ನು ಅವಲಂಬಿಸುತ್ತಿದ್ದಾರೆ. ಯೋಜನೆಯನ್ನು ಮಂಗಳೂರುವರೆಗೆ ವಿಸ್ತರಿಸುವುದರಿಂದ ಅಂತರರಾಜ್ಯ ಪ್ರಯಾಣಿಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ.
ಕಾಸರಗೋಡು ಜಿಲ್ಲೆಯ ಪ್ರಯಾಣದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಅತಿ ವೇಗದ ರೈಲನ್ನು ಮಂಗಳೂರುವರೆಗೆ ವಿಸ್ತರಿಸುವುದು ಅತ್ಯಗತ್ಯವಾಗಿದ್ದು, ಈ ವಿಷಯವನ್ನು ಉಲ್ಲೇಖಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲು ಸಭೆ ನಿರ್ಧರಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಜೀಜ್ ಮರಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷ ಟಿ.ಎ. ಮೂಸ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್ ಸ್ವಾಗತ ಭಾಷಣ ಮಾಡಿದರು. ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಭಾಷಣ ಮಾಡಿದರು. ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

.jpg)
.jpg)
