ನವದೆಹಲಿ: ಪಾಕಿಸ್ತಾನದ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೇಂದ್ರದ ವಿದೇಶಾಂಗ ನೀತಿಗೆ ಬದ್ಧವಾಗಿದೆ. ಆರ್ಎಸ್ಎಸ್ (RSS) ಯಾವುದೇ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿಲ್ಲ. ನಾವು ಹಿಟ್ಲರ್ ಕೂಡ ಅಲ್ಲ.
ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಬಾಗಿಲುಗಳನ್ನು ತೆರೆದಿಡಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಕುರಿತಾಗಿ ಆರ್ಎಸ್ಎಸ್ ನ ಕಾರ್ಯಕಾರಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿರುವ ಹೇಳಿಕೆಗೆ ಭಾಗವತ್ ಬೆಂಬಲವನ್ನು ವ್ಯಕ್ತಪಡಿಸಿದರು.
ಪಾಕಿಸ್ತಾನದ ವಿಷಯದಲ್ಲಿ ಆರ್ಎಸ್ಎಸ್ ಯಾವುದೇ ರೀತಿಯ ಪ್ರತ್ಯೇಕ ನಿಲುವನ್ನು ಹೊಂದಿಲ್ಲ. ಅದು ಕೇಂದ್ರದ ನೀತಿಗೆ ಅನುಗುಣವಾಗಿ ನಿಂತಿದೆ. ಅದು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿಲ್ಲ ಎಂದು ತಿಳಿಸಿದರು.
ಕಳೆದ ಮೇ ತಿಂಗಳಲ್ಲಿ ಹೊಸಬಾಳೆ ಅವರು ಭಾರತ ಭದ್ರತೆಯನ್ನು ಕಾಪಾಡಿಕೊಳ್ಳುವಾಗ ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಬಾಗಿಲುಗಳನ್ನು ತೆರೆದಿಡಬೇಕು. ದೇಶದ ಭದ್ರತೆ ಮತ್ತು ಸ್ವಾಭಿಮಾನವನ್ನು ರಕ್ಷಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಸಂವಾದಕ್ಕೆ ನಾವು ಬಾಗಿಲುಗಳನ್ನು ಮುಚ್ಚಬೇಕಾಗಿಲ್ಲ ಎಂದು ಹೇಳಿದರು.
ಹೊಸಬಾಳೆ ಅವರ ಹೇಳಿಕೆಗಳನ್ನು ಸಮರ್ಥಿಸಿದ ಮೋಹನ್ ಭಾಗವತ್, ಪಾಕಿಸ್ತಾನದಲ್ಲಿ ಭಾರತದ ವಿಭಜನೆ ತಪ್ಪಾಗಿದೆ ಎನ್ನುವ ಜನರೂ ಇದ್ದಾರೆ. ಅಲ್ಲಿನ ಅನೇಕರು ಆರ್ಎಸ್ಎಸ್ ನ ಕೆಲಸವನ್ನು ಹೊಗಳುತ್ತಾರೆ. ಪಾಕಿಸ್ತಾನ ವಿರೋಧಿ ಮತ್ತು ಎರಡು ರಾಷ್ಟ್ರಗಳ ಸಿದ್ಧಾಂತಕ್ಕೆ ವಿರುದ್ಧವಾಗಿರುವವರು ಒಟ್ಟಿಗೆ ಬದುಕುವುದು ಉತ್ತಮ ಎಂದು ಕೂಡ ಹೇಳುತ್ತಾರೆ ಎಂದರು.
ಪಾಕಿಸ್ತಾನ ಮತ್ತೆ ಎದ್ದು ನಿಲ್ಲಲು ಸಾಧ್ಯವಾಗದಂತೆ ಮಾಡಿದರೆ ಅದನ್ನು ಭಾರತದ ಮಡಿಲಿಗೆ ಸೇರಿಸಿಕೊಳ್ಳಬೇಕಾಗುತ್ತದೆ. ಅಲ್ಲಿನ ಜನರನ್ನು ಶಾಂತಿಯುತವಾಗಿ ಬದುಕಲು ಬಿಡಬೇಕಾಗುತ್ತದೆ. ಇದಕ್ಕಾಗಿ ಸಂವಾದ ನಡೆಸುವುದು ಮುಖ್ಯವಾಗುತ್ತದೆ. ನಾವು ಹಿಟ್ಲರ್ನಂತೆ ಅಲ್ಲ. ನಮ್ಮ ಸ್ವಭಾವ ಅಥವಾ ಮಾರ್ಗ ಹಿಟ್ಲರ್ ನಂತೆ ಅಲ್ಲ. ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಜಯಿಸಬೇಕು. ಅದಕ್ಕಾಗಿ ಒಳ್ಳೆಯದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

