ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರವು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದೀರ್ಘಕಾಲದ ಭದ್ರತಾ ಅಧಿಕಾರಿಗಳನ್ನು ಬದಲಾಯಿಸಿದೆ.
ಇದು ರಾಜ್ಯದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, 'ಸೇಡಿನ ರಾಜಕೀಯದ ಪರಮಾವಧಿ' ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.
ವರದಿಗಳ ಪ್ರಕಾರ, ಹೊಸ ಭದ್ರತಾ ಸಿಬ್ಬಂದಿಯ ನೇಮಕವನ್ನು ಒಪ್ಪಿಕೊಳ್ಳಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಬುಧವಾರ ತಡರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಳೀಘಾಟ್ನ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಯಾವುದೇ ಅಧಿಕೃತ ಭದ್ರತಾ ಸಿಬ್ಬಂದಿ ಇಲ್ಲದಂತಾಗಿದೆ. ಪ್ರೋಟೋಕಾಲ್ ಪ್ರಕಾರ ಮಮತಾ ಬ್ಯಾನರ್ಜಿ ಅವರಿಗೆ 'ಝಡ್ ಪ್ಲಸ್' ಭದ್ರತೆಯನ್ನು ನೀಡಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡೆರೆಕ್ ಒಬ್ರಯಾನ್, 'ಮಮತಾ ಅವರಿಗೆ ಕಳೆದ 20 ವರ್ಷಗಳಿಂದ ಭದ್ರತೆ ನೀಡುತ್ತಿದ್ದ ಪಿಎಸ್ಒಗಳನ್ನು ಬದಲಿಸಲಾಗಿದೆ. ಅವರು ಮನೆಯೊಳಗೆ ಇದ್ದಾರೆ. ಯಾವುದೇ ಭದ್ರತೆ ಇಲ್ಲ. ಮನೆಯ ಪ್ರವೇಶದ್ವಾರವನ್ನು ನಿರ್ಬಂಧಿಸಲು ನನ್ನ ಕಾರನ್ನು ನಿಲ್ಲಿಸಿದ್ದೇನೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಟಿಎಂಸಿ, 'ದ್ವೇಷ ರಾಜಕಾರಣದ ಪರಮಾವಧಿ ಇದಾಗಿದೆ. ಸುವೇಂದು ಅಧಿಕಾರಿ ಅವರೇ ನೀವು ನಿಜವಾಗಿಯೂ ಏನು ಸಂಚು ರೂಪಿಸುತ್ತಿದ್ದೀರಿ' ಎಂದು ಪ್ರಶ್ನಿಸಿದೆ.
'ಮಮತಾ ಅವರಿಗೆ ಭದ್ರತೆ ಒದಗಿಸುತ್ತಿದ್ದ ಸಿಬ್ಬಂದಿಯನ್ನು ತೆಗೆದು ಹಾಕಿರುವುದು ಆಡಳಿತಾತ್ಮಕ ಕ್ರಮವಲ್ಲ. ಅವರನ್ನು ಒಂಟಿಯಾಗಿಸಿ ಅಪಾಯಕ್ಕೆ ಸಿಲುಕಿಸುವ ಪ್ರಯತ್ನವಾಗಿದೆ' ಎಂದು ಆರೋಪಿಸಿದೆ.
'ಈ ಸೇಡಿನ ರಾಜಕೀಯವು ಹಾಗೂ ಅಧಿಕಾರದ ದುರುಪಯೋಗವು ನಿಮ್ಮ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ. ನೀಚ ರಾಜಕಾರಣಕ್ಕೆ ಮುಖವಿದ್ದರೆ ಅದು ನಿಸ್ಸಂದೇಹವಾಗಿ ನಿಮ್ಮಂತೆ ಕಾಣಿಸುತ್ತದೆ' ಎಂದು ಹೇಳಿದೆ.

